ಸಾರಾಂಶ
ಹಾವೇರಿ: ಮುಂಬರುವ ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು. ಕಳೆದ ೨೦ ವರ್ಷಗಳಿಂದ ಬಿಜೆಪಿದಲ್ಲಿದ್ದು, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿಯವರ ಕಟ್ಟಾ ಅಭಿಮಾನಿಯಾಗಿ ಅಂದಿನಿಂದ ಇಂದಿನವರೆಗೂ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಂಘಟನೆ ಮತ್ತು ಪ್ರಚಾರ ಮಾಡುತ್ತಾ ಬಂದಿದ್ದೇನೆ. ಪರಿಶಿಷ್ಟ ಜಾತಿಯ(ಎಡಗೈ) ಮಾದಿಗ ಸಮಾಜಕ್ಕೆ ಸೇರಿದವನಾಗಿದ್ದು, ಅವಿಭಾಜ್ಯ ಧಾರವಾಡ ಜಿಲ್ಲೆಯ ಮಾದಿಗ ಸಮಾಜದ ಅಧ್ಯಕ್ಷನಾಗಿ, ಧಾರವಾಡ, ಹಾವೇರಿ ಗದಗ ಮೂರು ಜಿಲ್ಲೆಗಳಲ್ಲಿ ಸಮಾಜದ ಸಂಘಟನೆ ಮಾಡುತ್ತಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ೧೫ ರಿಂದ ೨೫ ಸಾವಿರ ಮತದಾರರನ್ನು ಹೊಂದಿದ ಬಹುದೊಡ್ಡ ಸಮಾಜವಿದ್ದು, ಈ ಭಾಗದಲ್ಲಿ ಮಾದಿಗ ಸಮಾಜಕ್ಕೆ ರಾಜಕೀಯ ಸ್ಥಾನಮಾನಗಳು ಇಲ್ಲದೇ ವಂಚಿತಗೊಂಡ ಸಮಾಜ ನಮ್ಮದಾಗಿದೆ.ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಅಲ್ಪ ಅವಧಿಯಲ್ಲಿ ನಿಗಮದ ಯೋಜನೆಗಳನ್ನು ಚರ್ಮ ಕುಶಲ ಕರ್ಮಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಚರ್ಮ ಕುಶಲ ಕರ್ಮಿಗಳಿಗೆ ಸಹಾಯ ಮಾಡಿದ್ದೇನೆ. ಸದ್ಯ ಜರುಗಲಿರುವ ಶಿಗ್ಗಾವಿ ವಿಧಾನಸಭಾ ಮತ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ನನಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಹಾಲಿಂಗಪ್ಪ ಹಳವಳ್ಳಿ, ಜಿಲ್ಲಾ ಅಹಿಂದ ಒಕ್ಕೂಟದ ಅಧ್ಯಕ್ಷ ಮಹದೇವಪ್ಪ ವಡ್ಡರ್ ಇತರರು ಇದ್ದರು.