ಮಂಗಳೂರು: ಕಾಸರಗೋಡಿಗೆ ಇತ್ತೀಚೆಗೆ ಆಗಮಿಸಿದ ಕೇರಳ ಸರ್ಕಾರದ ಸ್ಥಳೀಯ ಸ್ವಯಂ ಆಡಳಿತ ಸಚಿವ ಕೆ.ಎಂ. ಸಾಜಿ ಅವರನ್ನು ಕನ್ನಡ ಪರ ಹೋರಾಟ ಸಂಘಟನೆಗಳ ಪ್ರತಿನಿಧಿಗಳು ಭೇಟಿ ಮಾಡಿ, ಕೇರಳ ಸರ್ಕಾರ ಮಂಡಿಸಿರುವ ಮಲಯಾಳ ಭಾಷಾ ಮಸೂದೆಗೆ ಸೂಕ್ತ ತಿದ್ದುಪಡಿಗಳನ್ನು ತರಬೇಕೆಂಬ ಮನವಿಯೊಂದಿಗೆ ಇತರ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು.ಸಚಿವರು ಮನವಿಯಲ್ಲಿರುವ ವಿಷಯಗಳನ್ನು ಆಲಿಸಿ, ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ವಿಷಯವನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅಗತ್ಯ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳುಕರಾಯ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟತೋಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ್, ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಹಾಗೂ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶಂಕರನಾರಾಯಣ ಭಟ್ ಇದ್ದರು.

ಉದುಮ ಶಾಸಕ ನೀಲಕಂಠನ್ ಅವರು ಸಚಿವರಲ್ಲಿ ಕನ್ನಡಿಗರ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.