ದುರುದ್ದೇಶದಿಂದ ಪ್ರಕಾಶ್‌ ವಿರುದ್ಧ ದೂರು

| Published : Jun 03 2025, 12:55 AM IST

ಸಾರಾಂಶ

ಹನೂರು ತಾಲೂಕು ರೈತ ಮುಖಂಡರು ತಹಸೀಲ್ದಾರ್‌ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿರುವ ಐಸ್ ಕ್ರೀಂ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಅವರ ಮೇಲೆ ದುರುದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ತಾಲೂಕು ರೈತ ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ತಿಳಿಸಿದರು.

ಹನೂರು ಪಟ್ಟಣದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಅವರ ಮೇಲೆ ದುರುದ್ದೇಶ ಪ್ರಕರಣ ದಾಖಲಿಸಿದ್ದು ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಗಳ ಮೇಲೆ ಅಸಂವಿಧಾನಿಕ ಪದಗಳನ್ನು ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಬಳಸಿರುವುದಿಲ್ಲ, ಚಾಮುಲ್ ನಿಂದ ಅವೈಜ್ಞಾನಿಕ ಐಸ್ ಕ್ರೀಂ ಘಟಕ ನಿರ್ಮಾಣ ಮಾಡುತ್ತಿರುವ ಬಗ್ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಜಿಲ್ಲಾಡಳಿತದ ಮುಂಭಾಗ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಪ್ರಕಾಶ್ ಅವರ ಮೇಲೆ ದೂರು ದಾಖಲು ಮಾಡಲಾಗಿದ್ದು, ಇದನ್ನು ಖಂಡಿಸಿ ಜಿಲ್ಲೆ ಹಾಗೂ ತಾಲೂಕುವಾರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ಜಿಲ್ಲಾಡಳಿತ ಇದನ್ನು ಪರಿಗಣಿಸಿ, ಜಿಲ್ಲಾಧ್ಯಕ್ಷ ಪ್ರಕಾಶ್ ಅವರ ಮೇಲೆ ದಾಖಲು ಮಾಡಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದರು.ತಾಲೂಕು ದಂಡಾಧಿಕಾರಿಗಳಿಗೆ ಮನವಿ:

ಹನೂರು ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನಂತರ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ರೈತ ಮುಖಂಡರಾದ ಮಾದಪ್ಪ, ಚನ್ನೂರು ಶಾಂತಕುಮಾರ್, ವಿನೇಶ್ ಕುಮಾರ್, ಅಮೋಘ, ಮಹೇಶ್ ಹಾಗೂ ಇನ್ನಿತರ ರೈತ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.