ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಯಾವುದೇ ಜೀವಿಗೆ ಹುಟ್ಟು ಸಾವು ಇದ್ದೇ ಇರುತ್ತದೆ. ಇದರ ಮಧ್ಯೆ ಜೀವನ ಹೇಗೆ ನಡೆಸಬೇಕು. ಬದುಕುವ ಕಲೆ ಕಲಿಸಿದ ಹೇಮರಡ್ಡಿ ಮಲ್ಲಮ್ಮನವರ ಜೀವನ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಹರಿಹರ ತಾಲೂಕಿನ ಎರೆಹೊಸಳ್ಳಿ ವೇಮನ ಸಂಸ್ಥಾನಮಠದ ರಡ್ಡಿಗುರುಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.ಭಾನುವಾರ ನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹೇಮ ವೇಮ ಚಾರಿಟೇಬಲ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 602ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ 14ನೇ ಶತಮಾನದಲ್ಲಿ ಮಹಿಳಾ ಸಂತರಾಗಿದ್ದರು. ಅವರು ವಚನಗಳನ್ನು ಬರೆದಿಲ್ಲ. ಆದರೆ ಅವರ ಜೀವನ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಆಕೆಯನ್ನು ಮಹಾಸಾದ್ವಿ ಅಥವಾ ಶ್ರೇಷ್ಠ ಮಹಿಳೆ ಎಂದು ಕರೆಯಲಾಗುತ್ತದೆ ಎಂದು ಹೇಳಿದರು. ಬಾಗಲಕೋಟೆ ಹೇಮ ವೇಮ ಸಂಸ್ಥೆಯ ಅಧ್ಯಕ್ಷ ಆರ್.ಎಲ್. ಕಟಗೇರಿ ಮಾತನಾಡಿ, ಈ ಜಗತ್ತಿನಲ್ಲಿ ಹೆಚ್ಚಾಗಿ ಮಹಿಳೆಯರ ಹೆಸರಿನಲ್ಲಿ ದೇವಸ್ಥಾನಗಳಿವೆ. ಮಹಿಳೆಯರಲ್ಲಿ ಸಹನಾ ಶಕ್ತಿ ಹೆಚ್ಚಾಗಿರುತ್ತದೆ. ಕುಟುಂಬ ನಿರ್ವಹಣೆ ಜವಾಬ್ದಾರಿ ಹೆಚ್ಚಿನ ಪಾಲು ಮಹಿಳೆಯದ್ದಾಗಿರುತ್ತದೆ ಎಂದು ಹೇಳಿ ಹೇಮರಡ್ಡಿ ಮಲ್ಲಮ್ಮಳ ಜೀವನ ಸಾಧನೆ ಕುರಿತು ಮಾತನಾಡಿದರು.
ಹೇಮ-ವೇಮ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಪೈಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಹೇಮರಡ್ಡಿ ಮಲ್ಲಮ್ಮಳ ಜೀವನ ಸಾಧನೆ, ನಡೆದು ಬಂದ ದಾರಿ ಕುರಿತು ಸುವಿವರವಾಗಿ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ ಶ್ರೀಶೈಲ ಮಲ್ಲಿಕಾರ್ಜುನ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್. ದೇಸಾಯಿ, ನಿವೃತ್ತ ಶಿಕ್ಷಕ ಡಿ.ಪಿ. ಅಮಲಜರಿ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಗಂಗಲ್, ಪದ್ಮಾವತಿ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಿ.ಎಸ್. ಹೊಸಗೌಡ್ರ ಸ್ವಾಗತಿಸಿದರು. ಅಶೋಕ ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್. ನಾಗನೂರ ನಿರೂಪಿಸಿದರು. ಹೇಮಾ ನಾಲತನಾಡ ವಂದಿಸಿದರು.