ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದ್ದರೆ ಆಗಲೇ ಆಗುತ್ತಿದ್ದರು. ಈಗ ಆ ಲಕ್ಷಣ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಅಪೇಕ್ಷೆ ಪಡುವುದನ್ನು ಯಾರೂ ತಪ್ಪಿಸುವುದಕ್ಕೂ ಆಗುವುದಿಲ್ಲ. ಆದರೆ ಸಿಎಂ ಆಗುವ ಲಕ್ಷಣ ಈಗ ಇಲ್ಲ. ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಯ್ತು. ಕೆಲಸ ಮಾಡುವುದರಲ್ಲಿ ಅವರು ಹಿಂದೆ ಬಿದ್ದಿದ್ದಾರಾ, ಯಾವುದಾದರೂ ಹಗರಣ ಇದಾವ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಅಂದ ಮೇಲೆ ಯಾವ ಆಧಾರದ ಮೇಲೆ ಅವರನ್ನು ಬದಲಾಯಿಸಲು ಹೋಗುತ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ಸಿಎಂ ಕುರ್ಚಿ ಖಾಲಿ ಇದೆಯಾ. ಸಿದ್ದರಾಮಯ್ಯ ಐದು ವರ್ಷನೂ ಇರುತ್ತಾರೆ ಎಂದರು.
ಮೂವರು ಡಿಸಿಎಂ ಅಗತ್ಯವಿದೆ: ರಾಜ್ಯದಲ್ಲಿ ಮೂವರು ಡಿಸಿಎಂಗಳ ಅಗತ್ಯತೆಯನ್ನು ಮತ್ತೆ ಪುನರುಚ್ಚರಿಸಿದ ರಾಜಣ್ಣ ಡಿಸಿಎಂ ಆಗಬೇಕು ಎನ್ನುವುದು ನನ್ನ ನಿರಂತರವಾದ ಇದ್ದೇ ಇದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಹೀಗಾಗಿ ಮೂವರು ಡಿಸಿಎಂಬೇಕು ಎಂದಿದ್ದಾರೆ. ಲೋಕಸಭಾ ಚುನಾವಣೆ ಇರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಮ್ಮನಿರಲು ಹೇಳಿದ್ದರು. ಹಾಗಾಗಿ ಇಷ್ಟು ದಿನ ಅದರ ಬಗ್ಗೆ ಮಾತನಾಡದೆ ಸುಮ್ಮನಿದ್ದೆ. ನಾನೂ ಕೂಡ ಖರ್ಗೆ ಅವರನ್ನು ಮತ್ತೇ ಖುದ್ದಾಗಿ ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡಿದರೆ ಮಾಡಲಿ ನಾನು ಯಾವಾಗಲೂ ಕೇಳಿರಲಿಲ್ಲ. ಯಾವ ಸಚಿವರ ಖಾತೆಗಳು ಬದಲಾವಣೆ ಆಗುವುದಿಲ್ಲ. ಬೆಳಗಾವಿ ಕಾಂಗ್ರೆಸ್ನಲ್ಲಿ ಆತಂರಿಕ ಕಚ್ಚಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಲಿನ ಬಳಿಕ ಸಹಜವಾಗಿ ಅಸಮಾಧಾನ ಏಳುತ್ತದೆ. ಅದು ಸೋತವರಿಗೆ ಆಗುವ ಸಹಜ ಅಸಮಾಧಾನ, ಮುಂದೆ ಅದು ಸರಿಯಾಗಲಿದೆ ಎಂದರು.
ಕೇಂದ್ರ ಸಚಿವರಾಗಿ ವಿ. ಸೋಮಣ್ಣ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯ ಇತಿಹಾಸದಲ್ಲಿ ಯಾರೂ ಕೇಂದ್ರದ ಮಂತ್ರಿ ಆಗಿರಲಿಲ್ಲ. ಇವರು ಆಗಿದ್ದಾರೆ. ಸೋಮಣ್ಣ ಜನಪರ ಕೆಲಸ ಮಾಡೋರು ಅಂತಾ ಹೇಳುತ್ತಾರೆ ಅದು ಸಾಧಿಸಿ ತೋರಿಸಲಿ ಎಂದು ಹೇಳಿದರು.ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಗೆ ವಿರೋಧ:ತುಮಕೂರು ರಾಯದುರ್ಗ ರೈಲ್ವೇ ಮಾರ್ಗ ಪೂರ್ಣಗೊಳಿಸಲಿ. ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ತರಲಿ. ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಗೆ ನಾನೂ, ಜಿ.ಪರಮೇಶ್ವರ್ ಇಬ್ಬರ ವಿರೋಧ ಇದೆ. ಎಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡಿದ್ದೇವೆ. ಏನೇ ಕಾಮಗಾರಿ ಆದರೂ ನೀರು ಕೊಡದಂತೆ ನಾವು ತಡೆಯುತ್ತೇವೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ. ಜೆಡಿಎಸ್- ಬಿಜೆಪಿ ನಮ್ಮ ಶತ್ರುಗಳು. ಇಬ್ಬರೂ ಮಿತ್ರರಾಗಿ ಗೆಲುವು ಸಾಧಿಸಿದ್ದಾರೆ. ಅವರ ಮಿತ್ರತ್ವ ಎಷ್ಟು ದಿನ ಇರತ್ತೋ ನೋಡೋಣ. ಮೋದಿ ಪ್ರಧಾನಿ ಆದರೆ ದೇವೇಗೌಡರು ದೇಶ ಬಿಟ್ಟು ಹೋಗ್ತಿನಿ ಅಂದಿದ್ದರು. ಈಗ ನೀನೇ ಕಣಪ್ಪ ದೇಶ ಕಾಪಾಡೋನು ಅಂತಾ ಸ್ವಾರ್ಥಕ್ಕಾಗಿ ಊಸರವಳ್ಳಿ ಥರ ಬಣ್ಣ ಬದಲಾಯಿಸುತ್ತಾರೆ ಎಂದು ವ್ಯಂಗ್ಯವಾಡಿದರು.