ಮಲ್ಪೆ: ತೊಟ್ಟಂ ಚರ್ಚ್‌ನಲ್ಲಿ ಅಪ್ಪಂದಿರ ದಿನಾಚರಣೆ

| Published : Mar 21 2025, 12:30 AM IST

ಸಾರಾಂಶ

ತೊಟ್ಟಂ ಗ್ರಾಮದ ಸಂತ ಅನ್ನಮ್ಮ ಚರ್ಚಿನ ಕುಟುಂಬ ಆಯೋಗದ ನೇತೃತ್ವದಲ್ಲಿ ಬುಧವಾರ ಅಪ್ಪಂದಿರ ದಿನಾಚರಣೆ ನಡೆಯಿತು. ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಪವಿತ್ರ ಬಲಿಪೂಜೆ ನೇರವೇರಿಸಿ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ತೊಟ್ಟಂ ಗ್ರಾಮದ ಸಂತ ಅನ್ನಮ್ಮ ಚರ್ಚಿನ ಕುಟುಂಬ ಆಯೋಗದ ನೇತೃತ್ವದಲ್ಲಿ ಬುಧವಾರ ಅಪ್ಪಂದಿರ ದಿನಾಚರಣೆ ನಡೆಯಿತು.

ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಪವಿತ್ರ ಬಲಿಪೂಜೆ ನೇರವೇರಿಸಿ ಸಂದೇಶ ನೀಡಿ ಸಂತ ಜೋಸೆಫರು ತಂದೆಯಂದಿರ ಪೋಷಕರಾಗಿದ್ದು ಅವರ ಸರಳತೆ, ಮೌನ ಹಾಗೂ ಆಧ್ಯಾತ್ಮಿಕತೆ ಸಕಲರಿಗೆ ಮಾದರಿಯಾಗಿದೆ. ಸಂತ ಜೋಸೆಫ್ ಒಬ್ಬ ಮೌನ ಸಂತರಾಗಿದ್ದರು, ಇತರ ಪ್ರಸಿದ್ಧ ಸಂತರಿಗೆ ಹೋಲಿಸಿದರೆ ಹೆಚ್ಚಾಗಿ ಕಡೆಗಣಿಸಲ್ಪಡುತ್ತಿದ್ದರು, ಆದರೆ ಅವರು ಮೋಕ್ಷದ ದೈವಿಕ ಯೋಜನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು ಎಂದರು.

ಪ್ರತಿಯೊಂದು ಕುಟುಂಬಗಳಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದ್ದು ಅವರ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ, ದಾನ ಮತ್ತು ಕ್ಷಮಿಸುವಂತಹ ಪ್ರಮುಖ ಸಾಮರ್ಥ್ಯಗಳನ್ನು ಗುರುತಿಸಬೇಕು. ಯಾವುದೇ ಸವಾಲುಗಳು ಎದುರಾದಾಗ ಅದನ್ನು ಧೈರ್ಯವಾಗಿ ಎದುರಿಸಲು ತಂದೆ ತನ್ನ ಮಕ್ಕಳಿಗೆ ಸದಾ ಭರವಸೆಯ ವ್ಯಕ್ತಿಯಾಗಿರುತ್ತಾರೆ ಎಂದರು.

ಪವಿತ್ರ ಬಲಿಪೂಜೆಯ ಬಳಿಕ ಚರ್ಚಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಪ್ರೀತಿಯ ತಂದೆ ಮತ್ತು ಶ್ರದ್ಧಾಭರಿತ ಪತಿಯಾಗಿರುವಾಗ ತಂದೆ ಜೀವನದ ಸವಾಲುಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು.

ಉಪಸ್ಥಿತರಿದ್ದ ಅಪ್ಪಂದಿರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಕುಟುಂಬ ಆಯೋಗದ ಸಂಚಾಲಕ ಹೆರಾಲ್ಡ್ ಡಿಸೋಜಾ ಸ್ವಾಗತಿಸಿದರು. ಧರ್ಮಪ್ರಾಂತ್ಯದ ಕುಟುಂಬ ಆಯೋಗದ ಕಾರ್ಯದರ್ಶಿ ಲೆಸ್ಲಿ ಆಯೋಗ ಕಾರ್ಯಕ್ರಮ ನಿರೂಪಿಸಿದರು.