ಉಡುಪಿ: ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತವಾಗಿದ್ದು, ಬಂದರಿನ ನೂತನ ಪ್ರವೇಶ ದ್ವಾರ ಹಾಗೂ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಮೀನುಗಾರಿಕೆ, ಬಂದರು ಇಲಾಖೆ ಹಾಗೂ ರಾಹೆ ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಸೂಚನೆ ಮೇರೆಗೆ ಮಂಗಳವಾರ ಕಾಮಗಾರಿ ಪ್ರಾರಂಭಗೊಂಡಿದೆ.ಬಂದರು ಪ್ರವೇಶ ದ್ವಾರ ಹಾಗೂ ರಾ.ಹೆ. ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಯಶ್‌ಪಾಲ್ ಸುವರ್ಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪೂರಕವಾಗಿ ಗೇಟ್ ಅಗಲವನ್ನು 24 ಮೀ.ಗೆ ಮರುವಿನ್ಯಾಸ ಮಾಡಲಾಗಿದ್ದು, ರಾಹೆ ಮಲ್ಪೆ ಬಂದರು ಸಂಪರ್ಕಿಸುವ ಭಾಗದಲ್ಲಿ ಕಿರುಸೇತುವೆಯ ಅಗಲ ವಿಸ್ತರಿಸಿ, ಗೇಟ್ ಹಾಗೂ ಕಿರುಸೇತುವೆ ಕಾಮಗಾರಿಯನ್ನು ಏಕ ಕಾಲದಲ್ಲಿ ಆರಂಭಿಸಿ, ಮೀನುಗಾರಿಕಾ ರಜೆ ಹಿನ್ನೆಲೆಯಲ್ಲಿ ಬಂದರಿನ ಚಟುವಟಿಕೆಗೆ ಸಮಸ್ಯೆಯಾಗದಂತೆ ಬಂದರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪೂರಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.

ರಾ.ಹೆ. ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ತಕ್ಷಣ ತೆರವುಗೊಳಿಸಲು, ಮೆಸ್ಕಾಂ ಇಲಾಖೆಯ ಮೂಲಕ ವಿದ್ಯುತ್ ಕಂಬಗಳ ಸ್ಥಳಾಂತರಿಸುವುದು, ಬಂದರು ಪ್ರವೇಶ ಬದಲಿ ಮಾರ್ಗದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು, ಸುಗಮ ವಾಹನ ಸಂಚಾರ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಬೆಳಗ್ಗೆಯಿಂದಲೇ ಕಾಮಗಾರಿ ಆರಂಭಗೊಂಡಿದ್ದು, ಮಲ್ಪೆ ಮೀನುಗಾರಿಕಾ ಬಂದರಿನ ಹಳೆ ಪ್ರವೇಶ ದ್ವಾರವನ್ನು ತೆರವು ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕುಂದರ್, ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್, ಸುಭಾಷ್ ಮೆಂಡನ್, ಪ್ರಕಾಶ ಬಂಗೇರ, ಕೃಷ್ಣ ಕೋಟ್ಯಾನ್, ಸುರೇಶ್ ಕುಂದರ್, ಮೀನುಗಾರಿಕೆ, ಬಂದರು ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.