ತಿಮ್ಮನಾಯಕನಹಳ್ಳಿ ಅಮಾನಿ ಅರಸಿಕೆರೆ ೬ ಕೋಟಿ, ನಮ್ಮ ಸ್ವಗ್ರಾಮ ಕೊಮ್ಮನಹಳ್ಳಿ ಕೆರೆ ೪ ಕೋಟಿ ಹಾಗೂ ಮಾಲುರು ದೊಡ್ಡಕೆರೆಗೆ ೪.೫ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಕಾಮಗಾರಿ ಕೆಲವು ಕಡೆ ಪ್ರಾರಂಭವಾಗಿದ್ದು ಇನ್ನೂ ಕೆಲವು ಕಡೆ ಆದಷ್ಟು ಬೇಗ ಪ್ರಾರಂಭವಾಗುತ್ತದೆ.

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕಿನ ಗ್ರಾಮಾಂತರ ಕೆರೆಗಳನ್ನು ೧೮ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದಾಗಿ ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು. ಬಂಗಾರಪೇಟೆ, ಮಾಲೂರು ತಾಲೂಕಿನ ಗಡಿಯಲ್ಲಿರುವ ಮಾರ್ಕಂಡಯ್ಯ ಡ್ಯಾಂಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜ್‌ ಅವರು ಮಾಲೂರು ತಾಲೂಕಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಾರ್ಕಂಡಯ್ಯ ಡ್ಯಾಂ ತನ್ನದೇ ಇತಿಹಾಸ ಹೊಂದಿದ್ದು, ಸುತ್ತಮುತ್ತಲು ರಮಣೀಯ ಸುಂದರ ತಾಣಗಳಿವೆ. ಕರ್ನಾಟಕ, ತಮಿಳುನಾಡು, ಆಂಧ್ರ ಇತರೆ ಕಡೆಯಿಂದ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಾರೆ. ಈ ಹಿನ್ನೆಲೆ ೮ ಕೋಟಿ ರು. ವೆಚ್ಚದಲ್ಲಿ ಇಲ್ಲಿಗೆ ಸಂಪರ್ಕ ರಸ್ತೆ, ವಾಕಿಂಗ್ ಪಾಥ್‌, ಪ್ರವಾಸಿಗರಿಗೆ ತಂಗುದಾಣ ಹಾಗೂ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

ತಿಮ್ಮನಾಯಕನಹಳ್ಳಿ ಅಮಾನಿ ಅರಸಿಕೆರೆ ೬ ಕೋಟಿ, ನಮ್ಮ ಸ್ವಗ್ರಾಮ ಕೊಮ್ಮನಹಳ್ಳಿ ಕೆರೆ ೪ ಕೋಟಿ ಹಾಗೂ ಮಾಲುರು ದೊಡ್ಡಕೆರೆಗೆ ೪.೫ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಕಾಮಗಾರಿ ಕೆಲವು ಕಡೆ ಪ್ರಾರಂಭವಾಗಿದ್ದು ಇನ್ನೂ ಕೆಲವು ಕಡೆ ಆದಷ್ಟು ಬೇಗ ಪ್ರಾರಂಭವಾಗುತ್ತದೆ ಎಂದರು.

ಇಲಾಖೆಯ ಇಂಜಿನಿಯರ್ ಹರಿಕೃಷ್ಣ, ಮುಖಂಡರಾದ ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜಕುಮಾರ್, ದೇವರಹಳ್ಳಿ ನಾಗರಾಜ್, ಲಕ್ಷ್ಮೀನಾರಾಯಣ, ನಲ್ಲಿತಿಮ್ಮನಹಳ್ಳಿ ನಾಗರಾಜ್, ಯುವ ಮುಖಂಡ ಕೆ.ಎನ್. ಹರೀಶ್‌ ನಂಜೇಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.