ಧಾರವಾಡ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸೇರಿ ಮೂರು ರಾಜ್ಯಗಳಲ್ಲಿ ಬಿಜೆಪಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು.

ಸೋಮವಾರ ಇಲ್ಲಿಯ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಬಿಜೆಪಿ ಪರ ಘೋಷಣೆಗಳನ್ನು ಕೂಗುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್‌ ಜ್ಯೋತಿ ಪಾಟೀಲ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಇಟ್ಟು ಪಂಚ ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಮತದಾರರು ಯಶಸ್ಸು ತಂದುಕೊಂಡಿದ್ದಾರೆ. ಈ ಪೈಕಿ ಪಶ್ಚಿಮ ಬಂಗಾಳದ ಜಯ ಮಾತ್ರ ದೊಡ್ಡದು. ಇಡೀ ಬಂಗಾಳದ ಜನರ ಬದುಕು ಕಸಿದುಕೊಂಡಿದ್ದ ಮಮತಾ ಬ್ಯಾನರ್ಜಿಗೆ ಈ ಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದೆ. ಈ ಮೂಲಕ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದರು.

ಬೇಸರ ಎಂದರೆ, ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರವೇ ನಿಂತು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದು ಸಾಧನೆ ಏನಲ್ಲ ಎಂದು ಮೇಯರ್‌ ಹೇಳಿದರು.

ಸಂಜಯ ಕಪಟಕರ, ಮೋಹನ ರಾಮದುರ್ಗ, ಸಂಜಯ ಕಪಟಕರ, ವಿಜಯಾನಂದ ಶಟ್ಟಿ, ಶಂಕರ ಶೇಳಕೆ, ಸುನಿಲ ಮೋರೆ, ರಾಕೇಶ ನಾಝರೆ, ಬಸವರಾಜ ಬಾಳಗಿ, ಶಿವಾನಂದ ಕವಳಿ, ಭೀಮರಾವ ಸವನೂರ, ಪ್ರಮೋದ ಬಾಗಿಲದ, ಮಂಜುನಾಥ ನಡಟ್ಟಿ, ರಮೇಶ ದೊಡ್ಡವಾಡ, ನಂದು ಪಂಡಿತ, ಮಲ್ಲಿಕಾರ್ಜುನ ಮಟಪತಿ, ಮಕ್ತ್ಂಹುಸೇನ ಲಷ್ಕರಿ, ಸುರಂಜನ್ ಗುಂಡೆ, ರಘು ಅರವೇಡ, ಗೋಪಾಲ ಸಂಕೊಚಿ, ನಾಗರಾಜ ನಾಯಕ, ಅನಿತಾ ಹೊಸಕೊಟಿ , ಭಾರತಿ ದಳವಾಯಿ ಇದ್ದರು.