ಸಾರಾಂಶ
ಬೈಲಹೊಂಗಲ: ಮನೆಯ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯ ಕತ್ತು ಸೀಳಿ ಭೀಕರ ಹತ್ಯೆ ಮಾಡಿದ ಘಟನೆ ತಾಲೂಕಿನ ವನ್ನೂರ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ.
ಬೈಲಹೊಂಗಲ: ಮನೆಯ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯ ಕತ್ತು ಸೀಳಿ ಭೀಕರ ಹತ್ಯೆ ಮಾಡಿದ ಘಟನೆ ತಾಲೂಕಿನ ವನ್ನೂರ ಗ್ರಾಮದಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ. ಗ್ರಾಮದ ನಿಂಗಪ್ಪ ಬಸಪ್ಪ ಅರವಳ್ಳಿ (41) ಹತ್ಯೆಯಾದ ವ್ಯಕ್ತಿ. ನಿಂಗಪ್ಪ ಭಾನುವಾರ ರಾತ್ರಿ ಮದ್ಯ ಸೇವಿಸಿ ನಶೆಯಲ್ಲಿ ಮನೆಯ ಕಟ್ಟೆಯ ಮೇಲೆ ಮಲಗಿದ್ದ. ಬೆಳಗಿನ ಜಾವ ಪತ್ನಿ ನೀಲಮ್ಮ ಬಾಗಿಲು ತೆರೆದು ನೋಡಿದಾಗ ಪತಿ ಕೊಲೆಯಾಗಿರುವುದನ್ನು ಕಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಹರಿತವಾದ ಆಯುಧದಿಂದ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿದೆ. ಎಸ್ಪಿ ಭೀಮಾಶಂಕರ ಗುಳೇದ, ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ರಾಘವೇಂದ್ರ ಹಲಾಲ್ದಾರ ನೇತೃತ್ವದ ತಂಡ ರಚಿಸಿ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.