ಸಾರಾಂಶ
ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಹಲವು ವರ್ಷಗಳಿಂದಲೇ ನೀರುಗಲ್ಲುಗಳು ಕರಗಿ ಕಡಲ ತೀರಗಳು ಮುಳುಗುತ್ತವೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಅದರಂತೆ ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಹಾಗಾಗಿ ಪ್ರಕೃತಿ ರಕ್ಷಣೆ ಮಾಡುವುದು ಮುಖ್ಯವಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಕೃತಿಯನ್ನು ಮಾನವ ವಿನಾಶದ ಅಂಚಿಗೆ ತಳ್ಳಿದ್ದಾನೆ. ಪರಿಸರದ ಮೇಲೆ ಅತಿಯಾದ ಆಕ್ರಮಣದಿಂದ ಪ್ರಕೃತಿ ವಿಕೋಪ ಉಂಟಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ವಿಷಾದ ವ್ಯಕ್ತಪಡಿಸಿದರು.ನಗರದ ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ , ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ, ನಗರಸಭೆ, ರೋಟರಿ ವತಿಯಿಂದನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಹಲವು ವರ್ಷಗಳಿಂದಲೇ ನೀರುಗಲ್ಲುಗಳು ಕರಗಿ ಕಡಲ ತೀರಗಳು ಮುಳುಗುತ್ತವೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಅದರಂತೆ ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಹಾಗಾಗಿ ಪ್ರಕೃತಿ ರಕ್ಷಣೆ ಮಾಡುವುದು ಮುಖ್ಯವಾಗಬೇಕು ಎಂದರು.ಪರಿಸರ ದಿನದಂದು ಮಾತ್ರ ಪರಿಸರ ಸಂರಕ್ಷಣೆ ಮಾಡದೆ ಪ್ರತಿದಿನವೂ ಕೂಡ ಪರಿಸರ ಸಂರಕ್ಷಿಸುವ ಕೆಲಸ ಆಗಬೇಕು. ನಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಟ್ಟಿ ಪ್ರಕೃತಿಯನ್ನು ಉಳಿಸೋಣ ಎಂದು ಹೇಳಿದರು.
ಇದೇ ವೇಳೆ ಅಗ್ನಿಶಾಮಕ ದಳದ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮಂಜುಳ ಇಟ್ಟಿ, ದಿಲೀಪ್ ಕುಮಾರ್ ಬಿ, ಸಂದೀಪ್ ಸಾಲಿಯಾನ, ಕೆ.ಲಕ್ಷ್ಮಿ ಯೋಗೇಶ್ವರ, ಪೂಜಾ ಶೆಟ್ಟಿ ಎರಡನೇ ಸಿವಿಲ್ ನ್ಯಾಯಾಧೀಶರಾದ ಶಂಕರ ವಜ್ರೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಆನಂದ್, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ಕಾರ್ಯದರ್ಶಿ ರಾಜೇಶ್ ಭಾಗವಹಿಸಿದ್ದರು.