ಸಾರಾಂಶ
ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಸಹಭಾಗಿತ್ವದಲ್ಲಿ ನಿರ್ಹವಣೆ ಮಾಡಲು ವಹಿಸಿಕೊಡಬೇಕೆಂಬುದು ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಆಶಯವಾಗಿದೆ.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ರಾಜ್ಯದ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳಿಗೆ ವಹಿಸಿಕೊಡಬೇಕೆಂದು ಜಿಲ್ಲಾ ಕೆರೆ ಬಳಕೆ ದಾರರ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಒಕ್ಕೂಟದ ಪದಾಧಿಕಾರಿಗಳು ಶೀಘ್ರ ಈ ಸಂಬಂಧ ತನ್ನ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಾಗರಾಜಯ್ಯ, ರಾಜ್ಯದಲ್ಲಿ ಕೆರಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 2001 ರಲ್ಲಿ ಜಲ ಸಂವರ್ಧನಾ ಯೋಜನಾ ಸಂಘವನ್ನು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಸ್ಥಾಪಿಸಿತ್ತು.
ಅದರ ಮೂಲಕ ರಾಜ್ಯದಲ್ಲಿ 3710 ಕೆರೆಗಳನ್ನು ಪುನಶ್ಚೇತನ ಮಾಡಿತು. ಈ ಕಾರ್ಯಕ್ಕೆ 3200 ಕೆರೆ ಬಳಕೆದಾರರ ಸಂಘಗಳಿಗೆ ಚಾಲನೆ ನೀಡಿತ್ತು ಎಂದರು.
2012ರಲ್ಲಿ ಜಲ ಸಂವರ್ಧನಾ ಯೋಜನೆ ಮುಕ್ತಾಯವಾಗುತ್ತಿದ್ದಂತೆ ರಾಜ್ಯ ಸರ್ಕಾರ ಸುಮ್ಮನಾಯಿತು. ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ವಿಚಾರವಾಗಿ ಯಾವುದೇ ಕಾರ್ಯಕ್ರಮ ಅಥವಾ ಕಾನೂನನ್ನು ರೂಪಿಸಲಿಲ್ಲ.
ಇದರಿಂದಾಗಿ ಹಲವು ಕೆರೆ ಸಂಘಗಳು ನಿಷ್ಕ್ರಿಯೆಗೊಂಡವು. ಕೆರೆ ಸಂಘಗಳ ಜಿಲ್ಲಾ ಒಕ್ಕೂಟ ಗಳು ಹಾಗೂ ರಾಜ್ಯ ಒಕ್ಕೂಟ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಸಹಭಾಗಿತ್ವದಲ್ಲಿ ಕಾರ್ಯ ಕ್ರಮಗಳ ಹಮ್ಮಿಕೊಳ್ಳುವುದು ಅಗತ್ಯವೆಂದರು.
ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಯನ್ನು ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಸಹಭಾಗಿತ್ವದಲ್ಲಿ ನಿರ್ಹವಣೆ ಮಾಡಬೇಕೆಂದು ಆದೇಶಿಸಿದ್ದಾರೆ.
ಆದರೆ ಇದುವರೆಗೂ ಈ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಗಮನ ಸೆಳೆಯಲು ಕಾರ್ಯತಂತ್ರ ರೂಪಿಸ ಬೇಕೆಂದರು.
ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿಸಿ.ಆರ್.ನಾಗರಾಜ್, ಉಪಾಧ್ಯಕ್ಷ ಐಯಣ್ಣ, ಖಜಾಂಚಿ ಬೋಜರಾಜು, ಸಿ.ನಾಗರಾಜು ಮುದ್ದಾಪುರ, ಎಂ.ಸಿದ್ದಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.