ಸಾರಾಂಶ
ಪ್ರಕರಣದ ಆರೋಪಿ ಪ್ರಸಾದ್ ಭಾನುವಾರ ಶೋರೂಂನ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಎಂಬವರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ.
ಉಡುಪಿ: ನಗರದ ಹೋಂ ಅಪ್ಲಾಯನ್ಸ್ ಶೋರೂಂನಲ್ಲಿ ಮ್ಯಾನೇಜರ್ ಗೆ ಚೂರಿ ಇರಿದ ಆರೋಪಿ ಸೆಕ್ಯೂರಿಟಿ ಗಾರ್ಡನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪ್ರಕರಣದ ಆರೋಪಿ ಪ್ರಸಾದ್ ಭಾನುವಾರ ಶೋರೂಂನ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಎಂಬವರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ.ನಗರದ ಹರ್ಷ ಶೋರೂಂನಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸಾದ್ಗೆ, ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಕೆಲಸದಿಂದ ತೆಗೆಯುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನನ್ನು ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಕೇಳಿಕೊಂಡಿದ್ದ. ಮರುದಿನ ಮೀಟಿಂಗ್ನಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ರೋನ್ಸನ್ ಹೇಳಿದ್ದರು.
ಇದಾಗಿ ಪ್ರಸಾದ್ ಗ್ರೌಂಡ್ ಫ್ಲೋರ್ನಲ್ಲಿ ಕಾದು ಕುಳಿತ್ತಿದ್ದು, ಅಲ್ಲಿಗೆ ಬಂದ ರೋನ್ಸನ್ಗೆ ಚೂರಿಯಲ್ಲಿ ಇರಿದ. ಪ್ರಾಣಾಪಾಯವನ್ನು ಅರಿತು ಓಡಿದ ರೋನ್ಸನನ್ನು ಬೆನ್ನಟ್ಟಿ ಮತ್ತೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈಗ ಈ ದೃಶ್ಯಗಳು ಶೋರೂಂನ ಸಿಸಿ ಕ್ಯಾಮರಗಳಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.ಭಾನುವಾರ ಸಂಜೆ 7.30ಕ್ಕೆ ನಡೆದ ಈ ಘಟನೆಯ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಪ್ರಸಾದ್ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಿ ಹಿರಿಯಡ್ಕ ಜೈಲಿಗೆ ಕಳುಹಿಸಿದ್ದಾರೆ.