ಅನ್ನಭಾಗ್ಯ ಅಕ್ಕಿಗಾಗಿ ಮಂಚನಬೆಲೆ ಗ್ರಾಮಸ್ಥರ ಪ್ರತಿಭಟನೆ

| Published : Mar 24 2024, 01:33 AM IST

ಸಾರಾಂಶ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಆದರೆ ತಾಲೂಕಿನ ಮಂಚನಬೆಲೆ ನ್ಯಾಯಬೆಲೆ ಅಂಗಡಿಯಲ್ಲಿ ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮಾಡಿಲ್ಲ ಎಂದು ಮಂಚನಬೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಆದರೆ ತಾಲೂಕಿನ ಮಂಚನಬೆಲೆ ನ್ಯಾಯಬೆಲೆ ಅಂಗಡಿಯಲ್ಲಿ ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ವಿತರಣೆ ಮಾಡಿಲ್ಲ ಎಂದು ಮಂಚನಬೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮಾಗಡಿಯ ಶ್ರೀನಿವಾಸ್ ಮಂಚನಬೆಲೆ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಅಕ್ಕಿ ವಿತರಣೆ ಮಾಡುತ್ತಿದ್ದರು. ಆದರೆ ಇಲ್ಲಿನ ಪಡಿತರದಾರರಿಗೆ ಎರಡು ತಿಂಗಳು ಆನ್‌ಲೈನ್ ಮೂಲಕ ಹೆಬ್ಬೆಟ್ಟು ಪಡೆದುಕೊಂಡು ಎರಡು ತಿಂಗಳ ಅಕ್ಕಿ ವಿತರಿಸಿಲ್ಲ. ಮಂಚನಬೆಲೆ, ದಬ್ಬಗುಳಿ, ಅಣೆ ಕೆಂಪೇಗೌಡನ ದೊಡ್ಡಿ ಸುತ್ತಮುತ್ತಲಿನ ಗ್ರಾಮ ಸೇರಿ 500ಕ್ಕೂ ಹೆಚ್ಚು ಪಡಿತರದಾರರಿದ್ದು ಇವರಿಗೆ ಎರಡು ತಿಂಗಳ ಅಕ್ಕಿ ವಿತರಣೆ ಮಾಡದೆ ಮೋಸ ಮಾಡಿದ್ದಾರೆ. ಅಕ್ಕಿ ಕೇಳಿದರೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದೆ. ಅದನ್ನು ಕೂಡ ವಿತರಣೆ ಮಾಡದಿದ್ದರೆ ಬಡವರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನಿಸಿ, ಸರ್ಕಾರ ಕೂಡಲೇ ಎರಡು ತಿಂಗಳ ಬಾಕಿ ಅಕ್ಕಿ ವಿತರಿಸಬೇಕೆಂದು ಒತ್ತಾಯಿಸಿದರು. ಮಂಚನಬೆಲೆ ಯುವ ಮುಖಂಡ ಹೇಮಂತ್ ಗೌಡ ಮಾತನಾಡಿ, ಎರಡು ತಿಂಗಳ ಪಡಿತರ ಪಡೆಯಲು ಹೆಬ್ಬಟ್ಟನ್ನು ಪಡೆದ ನಂತರ ಅಕ್ಕಿ ವಿತರಣೆ ಮಾಡದೆ ಗೋದಾಮಿಗೆ ಬಂದಿದ್ದ ಅಕ್ಕಿಯನ್ನು ಬೇರೆಡೆ ಸಾಗಿಸಿ ಈಗ ಎರಡು ತಿಂಗಳ ಅಕ್ಕಿ ವಿತರಣೆ ಮಾಡುವುದಿಲ್ಲ ಎಂದು ಹಳಬರನ್ನು ಇಲ್ಲಿಗೆ ಕಳಿಸದೆ ಹೊಸಬರಿಂದ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. 5 ಕೆಜಿ ಅಕ್ಕಿ ಬದಲಿಗೆ 3 ಕೆಜಿ ವಿತರಣೆ ಮಾಡಿ 2 ಕೆಜಿ ರಾಗಿ ವಿತರಿಸುತ್ತಿದ್ದಾರೆ. ಇನ್ನುಳಿದ 5 ಕೆಜಿಗೆ ಬ್ಯಾಂಕಿಗೆ ಹಣ ಬರುತ್ತದೆ ಎಂದು ಹೇಳುತ್ತಿದ್ದಾರೆ. ಎರಡು ತಿಂಗಳಿಂದ ಅಕ್ಕಿ ವಿತರಣೆಯಾಗಿದ್ದು ನಮಗೆ ಅನ್ಯಾಯವಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.ನಮಗೆ ಕಳೆದ ಎರಡು ತಿಂಗಳ ಅಕ್ಕಿ ವಿತರಣೆ ಮಾಡದೆ ಒಂದು ತಿಂಗಳ ಅಕ್ಕಿಯನ್ನು ಮಾತ್ರ ವಿತರಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಎರಡು ತಿಂಗಳ ಅಕ್ಕಿ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಉಡಾಫೆ ಉತ್ತರ ಕೊಡುತ್ತಿದ್ದು ನಮಗೆ ಬಾಕಿ ಬರಬೇಕಾದ ಅಕ್ಕಿ ವಿತರಣೆ ಮಾಡುವವರೆಗೂ ನಾವು ಅಕ್ಕಿ ಪಡೆಯುವುದಿಲ್ಲ ಎಂದು ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು.

ಶೀರಸ್ತೆದಾರರ ಬಳಿ ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಹೆಬ್ಬೆಟ್ಟು ಪಡೆದುಕೊಳ್ಳಲು ಪಡಿತರದಾರರು ಒಂದು ರುಪಾಯಿ ಹಣ ಕೂಡ ಕೊಡಬೇಕಿಲ್ಲ. ಹಣ ಪಡೆಯುವುದು ತಿಳಿದು ಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.

-ಶರತ್ ಕುಮಾರ್, ತಹಸೀಲ್ದಾರ್, ಮಾಗಡಿ ಈಗ ಮಾಹಿತಿ ಬಂದಿದೆ. ಅಕ್ಕಿ ವಿತರಣೆ ಮಾಡದಿರುವ ಬಗ್ಗೆ ತನಿಖೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಪಡಿತರ ವಿತರಣೆ ಆಗಬೇಕಾದರೆ ಪ್ರತಿಯೊಬ್ಬ ಪಡಿತರದಾರರು ಹೆಬ್ಬೆಟ್ಟು ಕೊಡುವುದು ಕಡ್ಡಾಯವಾಗಿದ್ದು, ಹೆಬ್ಬೆಟ್ಟು ಪಡೆದು ಅಕ್ಕಿ ವಿತರಣೆ ಆಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ.

-ಗಣೇಶ್, ತಾಲೂಕು ಆಹಾರ ಶೀರಸ್ತೆದಾರರು ಮಾಗಡಿ