ಸಾರಾಂಶ
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಸ್ಥಳೀಯವಾಗಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯರನ್ನು ಕಡ್ಡಾಯ ವಾಗಿ ಆಹ್ವಾನಿಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಮೆಸ್ಕಾಂ ಮತ್ತು ಕೆಎಸ್.ಆರ್.ಟಿಸಿ ಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರನ್ನು ಆಹ್ವಾನಿಸಬೇಕು. ಈ ಬಗ್ಗೆ ಅನೇಕ ಬಾರಿ ಸೂಚನೆ ನೀಡಲಾಗಿದೆ. ಬಹಳಷ್ಟು ಕಡೆ ಲೈನ್ಮಾನ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಸದಸ್ಯರಿಂದ ಕೇಳಿ ಬರುತ್ತಿವೆ.ಅಂತಹ ಲೈನ್ಮನ್ಗಳನ್ನು ಬದಲಿಸಬೇಕು ಎಂದರು. ಸದಸ್ಯ ಸಪ್ತಕೋಟಿ ಧನಂಜಯ್ ಮಾತನಾಡಿ, ನೀವು ಉಚಿತ ಕರೆಂಟ್ ಎಂದು ಹೇಳುತ್ತೀರಿ. ಆದರೆ ಮೆಸ್ಕಾಂನವರು ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಾರೆ. ಇದೇನು ನೀವು ಉಚಿತ ಕರೆಂಟ್ ಕೊಡುವ ರೀತಿ ಎಂದು ಜನ ನಮ್ಮನ್ನು ಪ್ರಶ್ನಿ ಸುತ್ತಿದ್ದಾರೆ. ಇದರಿಂದ ನಮಗೆ ಮುಜುಗರವಾಗುತ್ತಿದೆ.ಈ ಸಮಸ್ಯೆಗೆ ಮೆಸ್ಕಾಂನವರು ಪರಿಹಾರ ಸೂಚಿಸಬೇಕು ಎಂದರು. ಸದಸ್ಯ ಸಿಂಗಟಗೆರೆ ಮಧು ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ರಸಗೊಬ್ಬರದ ಜತೆ ಅಕ್ಕಿಯನ್ನು ಶೇಖರಿಸಿ ಇಡಲಾಗುತ್ತಿದೆ. ಇದರಿಂದ ಅಕ್ಕಿ ಕಲುಷಿತವಾಗುತ್ತಿದೆ. ಹಾಗಾಗಿ ರಸಗೊಬ್ಬರ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಶೇಖರಿ ಸಿಡುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಬೇಕು ಎಂದರು.
ಈಗಾಗಲೆ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಕಾರ್ಯ ಆಹಾರ ಇಲಾಖೆ ಕೈಗೊಂಡಿದೆ. ನಿಯಮಾನುಸಾರ ಕಾರ್ಡ ರದ್ದು ಪಡಿಸಲು ತಕರಾರಿಲ್ಲ. ಆದರೆ ದಂಡ ವಿಧಿಸುವುದಕ್ಕೆ ಜನರ ವಿರೋಧವಿದೆ. ಆದುದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರಿಗಾಗಿಯೇ ಕಾರ್ಡ ಹಿಂದಿರುಗಿಸುವಂತೆ ಮಾಹಿತಿ ಫಲಕ ಅಳವಡಿಸಬೇಕು ಎಂದು ಸದಸ್ಯ ಸಪ್ತಕೋಟಿ ಧನಂಜಯ್ ಸಲಹೆ ನೀಡಿದರು.ಅಧ್ಯಕ್ಷ ಟಿ.ಕಲ್ಲೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ಅಧಿಕಾರಿಗಳ ಸ್ಪಂದನೆ ತೃಪ್ತಿಕರವಾಗಿದೆ. ಯೋಜನೆ ಜಾರಿಯಾದಾಗಿನಿಂದ ಇಲ್ಲಿವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ₹2846594 ಕೋಟಿ ಹಣ ಫಲಾನುಭವಿಗಳಿಗೆ ಸೇರಿದರೆ, ಗೃಹಜ್ಯೋತಿ ಯೋಜನೆಯಡಿ (ಮೆಸ್ಕಾಂ)ಬೀರೂರು, ಕಡೂರು ವಲಯಗಳಿಂದ ಅಂದಾಜು ₹54 ಕೋಟಿ ವಿದ್ಯುತ್ ಬಿಲ್ ಭರಿಸಲಾಗಿದೆ. ಶಕ್ತಿ ಯೋಜನೆಯಡಿ ₹62 ಕೋಟಿ 17 ಲಕ್ಷ ಹಣವನ್ನು ಮಹಿಳೆಯರ ಪ್ರಯಾಣಕ್ಕೆ ಉಚಿತವಾಗಿ ನೀಡಲಾಗಿದೆ. ಯುವ ನಿಧಿ ಯೋಜನೆಯಡಿ 2 ಕೋಟಿ 28 ಲಕ್ಷ ಯುವಕ, ಯುವತಿಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ ಆಹಾರ (ಅನ್ನಭಾಗ್ಯ) ಇಲಾಖೆ ಸೇರಿದಂತೆ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗೆ ₹೫೫೦ ಕೋಟಿ ವೆಚ್ಚ ಮಾಡಿ ದಾಖಲೆ ನಿರ್ಮಿಸಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಕಾರ್ಯದರ್ಶಿ ದೇವರಾಜ್, ಸದಸ್ಯರಾದ ಪುಷ್ಪಾ ರಮೇಶ್, ಗಿರೀಶ್ ನಾಯ್ಕ, ಧನಂಜಯ್, ಸಿಂಗಟಗೆರೆ ಮಧು, ಮಚ್ಚೇರಿ ಚನ್ನಪ್ಪ, ಸೋಮೇಶ್, ತೌಸಿಫ್, ಶೋಭಾ, ಸುಜಾತ, ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.-- ಬಾಕ್ಸ್ --ಇತ್ತೀಚೆಗೆ ಕೆಎಸ್.ಆರ್.ಟಿಸಿಬಸ್ ನಿಲ್ದಾಣದಲ್ಲಿ ರಾತ್ರಿ ಸಮಯ ಲೈಟ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಡಿಪೋ ಮ್ಯಾನೇಜರ್ ಗಮನಕ್ಕೆ ತಂದಾಗ ಸ್ಥಳಕ್ಕೆ ಬಂದ ಅವರು ಜನರನ್ನು ಕರೆದುಕೊಂಡು ಬಂದು ಗಲಾಟೆ ಮಾಡುತ್ತಿದ್ದೀರಿ. ನಿಮ್ಮ ಮೇಲೆ ಪೊಲೀಸ ರಿಗೆ ದೂರು ಕೊಡುತ್ತೇನೆ ಎಂದು ಹೇಳಿ ಸ್ಥಳಕ್ಕೆ ಪೊಲೀಸರನ್ನು ಕರೆಸಿದರು ಎಂದು ಸದಸ್ಯ ಸಪ್ತಕೋಟಿ ಧನಂಜಯ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಈ ವಿಚಾರವಾಗಿ ಡಿಪೋ ವ್ಯವಸ್ಥಾಪಕರನ್ನು ಕರೆಸಿ ಮಾತನಾಡಲಾಗುವುದು ಎಂದು ಸಭೆಗೆ ತಿಳಿಸಿದರು.-- ಬಾಕ್ಸ್--ಆರ್ಥಿಕವಾಗಿ ಸಬಲರಾಗಿರುವ ಅನೇಕರು ಬಿಪಿಎಲ್ ಕಾರ್ಡ ಹೊಂದಿದ್ದಾರೆ.ಅಂತಹ ೩೩೦೮ ಜನರನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಅವರಾಗಿಯೇ ಬಂದು ಬಿಪಿಎಲ್ ಕಾರ್ಡ ಹಿಂದಿರುಗಿಸಿಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ಕಾರ್ಡಗಳನ್ನು ರದ್ದು ಪಡಿಸುವ ಜತೆಗೆ ದಂಡ ವಿಧಿಸಲು ಅವಕಾಶವಿದೆ. ಕಳೆದ ವರ್ಷ ಸುಮಾರು ₹೨೫ ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಆಹಾರ ನಿರೀಕ್ಷಕ ಶ್ರೀನಿವಾಸ್ ತಿಳಿಸಿದರು.8ಕೆಕೆಡಿಯು2. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್ ಮಾತನಾಡಿದರು. ದೇವರಾಜ್ ಇದ್ದರು.