ಮಂಡ್ಯದ ಭಿಕ್ಷುಕಿಯೊಬ್ಬಳ ಮನೆಯಲ್ಲಿ ₹40 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆದ ಬೆನ್ನಲ್ಲೇ, ಶ್ರೀರಂಗಪಟ್ಟಣದ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ ₹2.50 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆಗಿರುವುದು ಜನರನ್ನು ಹುಬ್ಬೇರಿಸಿದೆ.
ಶ್ರೀರಂಗಪಟ್ಟಣ : ಮಂಡ್ಯದ ಭಿಕ್ಷುಕಿಯೊಬ್ಬಳ ಮನೆಯಲ್ಲಿ ₹40 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆದ ಬೆನ್ನಲ್ಲೇ, ಶ್ರೀರಂಗಪಟ್ಟಣದ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ ₹2.50 ಲಕ್ಷಕ್ಕೂ ಹೆಚ್ಚು ಹಣ ಪತ್ತೆ ಆಗಿರುವುದು ಜನರನ್ನು ಹುಬ್ಬೇರಿಸಿದೆ. ಭಿಕ್ಷುಕಿ ಮನೆಯಲ್ಲಿನ ಕಸದ ರಾಶಿ ನಡುವೆ ಸೇರಿಕೊಂಡಿದ್ದ ಮೂಟೆಗಟ್ಟಲೆ ಹಣ, ಚಿಲ್ಲರೆ ಕಾಸು ಜೊತೆ ಅಮೆರಿಕದ ಡಾಲರ್ ಸಹ ಸಿಕ್ಕಿದೆ.
ಸಾವಿತ್ರಿ (60) ಎನ್ನುವವರ ಕಳೆದ 15 ವರ್ಷದಿಂದ ಭಿಕ್ಷೆ ಬೇಡುತ್ತಿದ್ದು, ಚೀಲದಲ್ಲಿ ಹಣವನ್ನು ತುಂಬಿಟ್ಟಿದ್ದರು. 500, 200, 100, 50, 20, 10 ರು. ಮುಖ ಬೆಲೆಯ ನೋಟುಗಳ ಎಣಿಕೆಯಲ್ಲಿ ಇದುವರೆಗೆ ₹1,85,000 ಜೊತೆ ಒಂದು ಅಮೆರಿಕನ್ ಡಾಲರ್ ಹಾಗೂ ಹಳೆಯ 500ರ ನೋಟ್ ದೊರೆತಿದೆ. ಅಲ್ಲದೆ ಇನ್ನೂ 6 ಚೀಲ ದೊರೆತಿದ್ದ ಚಿಲ್ಲರೆ ಹಣವನ್ನು ಏಣಿಕೆ ಮಾಡಬೇಕಾಗಿದೆ.
ಸಾವಿತ್ರಿ ಅವರ ತಾಯಿ ಪಾರ್ವತಿ ಇತ್ತೀಚೆಗೆ ಮೃತರಾಗಿದ್ದರು. ಅವರಿಗೆ ವೃದ್ಧಾಪ್ಯ ವೇತನ ಬರುತ್ತಿದ್ದು, ಅಕ್ಕ ಪಕ್ಕದ ಮನೆಯವರು ಸೇರಿ ಅವರ ಅಂತ್ಯ ಸಂಸ್ಕಾರ ನಡೆಸಿದ್ದರು. ಆಕೆಯ ಮಗಳು ಸಾವಿತ್ರಿ ಕೂಡ ಭಿಕ್ಷುಕಿ ಆಗಿದ್ದರಿಂದ ಒಂಟಿಯಾಗಿ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಸ್ನಾನಘಟ್ಟ, ಗಂಗಾಧರೇಶ್ವರ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಈ ಹಣವನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ಮನೆಯಲ್ಲಿ ಕಸದ ರಾಶಿ ಜೊತೆ ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇತರ ತ್ಯಾಜ್ಯ
ಮನೆಯಲ್ಲಿ ಕಸದ ರಾಶಿ ಜೊತೆ ಪ್ಲಾಸ್ಟಿಕ್ ಪೇಪರ್ ಸೇರಿದಂತೆ ಇತರ ತ್ಯಾಜ್ಯಗಳೊಂದಿಗೆ ಈ ಹಣವನ್ನಿಟ್ಟುಕೊಂಡು ಬೆಳಕಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ಈಕೆಗೆ ಹುಷಾರಿಲ್ಲದ ಕಾರಣ ಅಕ್ಕ-ಪಕ್ಕದಲ್ಲಿದ್ದ ಶ್ರೀರಂಗನಾಯಕ ಸ್ತ್ರೀಶಕ್ತಿ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಡಾ? ಭಾನುಪ್ರಕಾಶ್ ಅವರು ಅನುಮಾನದಿಂದ ಸ್ಥಳೀಯರು ಜನರ ಜೊತೆ ತೆರಳಿ ನೋಡಿದಾಗ ಸಾವಿತ್ರಿ ಅನಾರೋಗ್ಯದಿಂದ ನರಳುತ್ತಿದ್ದುದ್ದು ಕಂಡು ಬಂದಿದೆ. ತಕ್ಷಣವೇ ಆಕೆಯನ್ನು ಉಪಚರಿಸಿ, ಹೊರ ಕರೆತಂದು ನಂತರ ಮನೆಯಲ್ಲಿದ್ದ ತ್ಯಾಜ್ಯವನ್ನು ತೆಗೆಸಲು ಮುಂದಾಗಿದ್ದರು.
ವಿವಿಧ ಸಂಘ ಸಂಸ್ಥೆಯವರು ಆಗಮಿಸಿ ಸಾವಿತ್ರಿ ಅವರಿಗೆ ಸ್ನಾನ ಮಾಡಿಸಿ, ಮನೆಯನ್ನು ಸ್ವಚ್ಚಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ನೋಟು ಹಾಗೂ ಚಿಲ್ಲರೆ ಹಣ ತುಂಬಿದ ಚೀಲಗಳು ಸಿಕ್ಕಿವೆ. ಹಣದ ಚೀಲಗಳನ್ನು ಹೊರ ತೆಗೆದ ಸಂಘಟಕರು ಅದರಲ್ಲಿದ್ದ ಹಣವನ್ನು ಸುರಿದು ಎಣಿಸಲು ಮುಂದಾಗಿದ್ದಾರೆ.
ಸಾವಿತ್ರಿ ಹೆಸರಿಗೆ ಹಣ ಜಮೆ: ಡಾ.ಭಾನುಪ್ರಕಾಶ್ ಶರ್ಮ
ನಮ್ಮ ಮನೆಯ ಹಿಂಬದಿಯಲ್ಲಿ ಹಲವು ವರ್ಷಗಳಿಂದಲೂ ವಾಸವಿದ್ದ ಪಾರ್ವತಿ ಮತ್ತು ಆಕೆಯ ಮಗಳು ಸಾವಿತ್ರಿ ನಮಗೆ ಚಿರಪರಿಚಿತರು. ಪುಟ್ಟ ಮನೆಯಲ್ಲಿ ವಾಸವಿದ್ದ ಅವರು ಈ ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 15 ವರ್ಷದಿಂದ ಬಿಕ್ಷ ಬೇಡಿ ಬರುತ್ತಿದ್ದರು. ಅಕ್ಕಪಕ್ಕದಲ್ಲಿದ್ದ ನಾವು ಅವರಿಗೆ ತಿನ್ನಲು ಆಹಾರವನ್ನು ನೀಡುತ್ತಿದ್ದೆವು, ಆದರೆ ಭಿಕ್ಷೆ ಬೇಡಿ ಇಷ್ಟು ಹಣ ಚೀಲದಲ್ಲಿ ಇಟ್ಟಿರುವುದು ನಮಗೆ ಗೊತ್ತಿರಲಿಲ್ಲ. ಈಗ ಹಣವನ್ನು ಏಣಿಕೆ ಮಾಡಿ ಆಕೆಯ ಹೆಸರಿಗೆ ಜಮಾ ಮಾಡುವುದಾಗಿ ಭಾನುಪ್ರಕಾಶ್ ಶರ್ಮ ಹಾಗೂ ವಿಶಾಲಾಕ್ಷಿ ತಿಳಿಸಿದರು.
