ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆ

ಮಂಗಳೂರು: ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆಗೊಂಡಿತು.

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾನಿಲಯ ಮತ್ತು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಎನ್- ಜೆನ್ ಅಂಚೆ ಕಚೇರಿ ಸ್ಥಾಪನೆಯ ಬಳಿಕ ನಾಲ್ಕನೇ ಎನ್‌-ಜೆನ್‌ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ ಮಾಡಿದೆ.

ಈ ಕಚೇರಿಯು ಉಚಿತ ಹೈಸ್ಪೀಡ್ ವೈಫೈ ಮತ್ತು ಸ್ವಯಂ ಬುಕಿಂಗ್ ಕಿಯೋತ್ಸ್‌, ಆಧುನಿಕವಾಗಿ ಬರೆಯುವ ಸ್ಥಳ, ವಿಶ್ರಾಂತಿಗಾಗಿ ಲಾಬಿ ಹಾಗೂ ಸ್ಫೂರ್ತಿದಾಯಕ ಪುಸ್ತಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಹೊಂದಿದೆ. ಜತೆಗೆ ಪ್ರತ್ಯೇಕ ಗೇಮ್ ಝೋನ್, ಸಾಂಪ್ರದಾಯಿಕ ಅಂಚೆ ಪೆಟ್ಟಿಗೆ ಹಾಗೂ ಜೆನ್‌-ಝಡ್‌ ವಿದ್ಯಾರ್ಥಿಯ ವಿಶೇಷ ಚಿತ್ರವಿರುವ ಸೆಲ್ಫಿ ಪಾಯಿಂಟ್ ಇರಲಿದೆ.ಇಂಡಿಯಾ ಪೋಸ್ಟ್‌ನ ಜನರಲ್‌ ಮ್ಯಾನೆಜರ್‌ (ಪೋಸ್ಟಲ್‌ ಅಕೌಂಟ್ಸ್‌ ಆಂಡ್‌ ಫೈನಾನ್ಸ್‌) ಜ್ಯೂಲಿಯಾ ಮೊಹಪಾತ್ರ ಈ ನೂತನ ಕಚೇರಿಯನ್ನು ಉದ್ಘಾಟಿಸಿದರು. ಎನ್‌ಐಟಿಕೆ ಡೆಪ್ಯುಟಿ ಡೈರೆಕ್ಟರ್‌ ಪ್ರೊ.ಸುಭಾಶ್‌ ಸಿ. ಯರಗಲ್‌, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಡೈರೆಕ್ಟರ್‌ (ಪೋಸ್ಟಲ್‌ ಸರ್ವಿಸಸ್‌) ಶ್ರೀಹರ್ಷ, ಮಂಗಳೂರು ವಿಭಾಗದ ಸೀನಿಯರ್‌ ಸುಪರಿಂಟೆಂಡೆಂಟ್‌ ದಿನೇಶ ಪಿ. ಮತ್ತಿತರರು ಇದ್ದರು.

ಇದೇ ಸಂದರ್ಭ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಪುಣ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ ಪಿ. ಸ್ವಾಗತಿಸಿದರು. ಲೋಕನಾಥ ಎಂ. ವಂದಿಸಿದರು.