ಮಂಗಳೂರು: ಮಂಗಳೂರು ದಸರಾವನ್ನು ದಶ ವೈಭವದ ಕಾರ್ಯಕ್ರಮಗಳೊಂದಿಗೆ ವಿಭಿನ್ನವಾಗಿ ಆಚರಿಸಲು ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳೂರು ದಸರಾ ಮಹೋತ್ಸವ ರೂವಾರಿಗಳಾದ ಬಿ. ಜನಾರ್ದನ ಪೂಜಾರಿ ಆಶಯದಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವವನ್ನು ವೈಭವಯುತವಾಗಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕಿನ್ನಿಪಿಲಿ ಪಂಥ, ಮುದ್ದು ಶಾರದೆ, ಮಕ್ಕಳ ದಸರಾ, ಕಾಲೇಜು ಮಟ್ಟದ ಜನಪದ ಸ್ಪರ್ಧೆ, ಕವಿಗೋಷ್ಠಿ, ಮ್ಯಾರಥಾನ್, ರುದ್ರತಾಂಡವ ನೃತ್ಯ, ಮಹಿಳಾ ದಸರಾ ಸೇರಿದಂತೆ 10 ವಿಭಿನ್ನಕಾರ್ಯಕ್ರಮಗಳು ನಡೆಯಲಿವೆ ಎಂದರು.ದಸರಾ ಸಂದರ್ಭ ಪ್ರತಿನಿತ್ಯ ಅಕ್ಷರಾಭ್ಯಾಸ, ಚಂಡಿಕಾಹೋಮ ನಡೆಯಲಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅ.16ರಂದು ಕೃಷ್ಣವೇಷ ಸ್ಪರ್ಧೆ, ಆ.28ರಂದು ನಾರಾಯಣಗುರುಪೂಜೆ ಮತ್ತು ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ. ಅಸಾಮಾನ್ಯ ಸ್ತ್ರೀ ಗೌರವಾರ್ಪಣೆ, ನಾನಾ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ ಎಂದರು.
ದಸರಾ ಮಹೋತ್ಸವದಲ್ಲಿ ಒಂದೊಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಲು ಈಗಾಗಲೇ ಸಂಸ್ಥೆಗಳು ಮುಂದೆ ಬಂದಿದ್ದು, ಡೈಮಂಡ್, ಗೋಲ್ಡನ್, ಸಿಲ್ವರ್, ಬ್ರಾಂಜ್ ಕಾರ್ಡ್ ಆಧಾರದಲ್ಲಿ ಅವರಿಗೆ ಅವಕಾಶ ನೀಡಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕ್ಷೇತ್ರದ ಸಮೀಪದಲ್ಲೇ 5.5 ಸೆಂಟ್ಸ್ ಹೆಚ್ಚುವರಿ ಜಾಗ ಖರೀದಿಸಲಾಗಿದೆ. ಕ್ಷೇತ್ರದ ಅನ್ನ ಸಭಾಗೃಹದ ಹವಾನಿಯಂತ್ರಣ ವ್ಯವಸ್ಥೆ ಸಂಪೂರ್ಣ ಆಧುನೀಕರಣಗೊಳಿಸಲಾಗುತ್ತಿದೆ. ಪಾಕಶಾಲೆಯನ್ನು ನವಿಕರಣಗೊಳಿಸಲು ರೂಪುರೇಷೆ ರಚಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಸಹಕಾರವೂ ಅಗತ್ಯವಿದೆ ಎಂದರು.ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ.ಪೂಜಾರಿ, ಕೃತಿನ್ ಡಿ.ಅಮೀನ್, ಕಿಶೋರ್ ಕುಮಾರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಹರೀಶ್ ಕುಮಾರ್, ಸೂರ್ಯಕಾಂತ್ ಜೆ. ಸುವರ್ಣ, ವಾಸುದೇವ ಕೋಟ್ಯಾನ್, ವಸಂತ ಕಾರಂದೂರು, ಲತೀಶ್ ಕೋಟ್ಯಾನ್, ಗೌರವಿ ರಾಜಶೇಖರ್, ಶೈಲೇಂದ್ರ ವೈ.ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ ಇದ್ದರು.ದಿನೇಶ್ ರಾಯಿ ನಿರೂಪಿಸಿದರು.