ಮಂಗಳೂರು: ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಹಾಗೂ ಮಕ್ಕಳಲ್ಲಿ ಏಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಲು ಮುಂದಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮವಸ್ತ್ರದ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಜಾತಿ-ಮತ-ಭೇದ ಮರೆಸಿ ಸಮಾನತೆಯ ಭಾವ ಮೂಡಿಸುವುದು. ಆದರೆ ಓಲೈಕೆ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರವೇ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಜಿಸುತ್ತಿರುವುದು ಎಷ್ಟು ಸರಿ? ಈ ಹಿಂದೆ ಉಂಟಾಗಿದ್ದ ಹಿಜಾಬ್ ವಿವಾದ ಇನ್ನೂ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇರುವಾಗಲೇ, ನ್ಯಾಯಾಂಗದ ಪ್ರಕ್ರಿಯೆಯನ್ನು ಕಡೆಗಣಿಸಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವುದು ನ್ಯಾಯಾಂಗ ನಿಂದನೆಯಾಗಿದೆ. ತನ್ನ ವೋಟ್ ಬ್ಯಾಂಕ್ಗಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಸಹ ಧಿಕ್ಕರಿಸುವ ಮಟ್ಟಕ್ಕೆ ಹೋಗುವ ಕಾಂಗ್ರೆಸ್ನದ್ದು ಎಂದಿಗೂ ಒಡೆದು ಆಳುವ ನೀತಿ ಎಂದರು.ಹಿಜಾಬ್ಗೆ ಅವಕಾಶ ನೀಡಿ, ಕೇಸರಿ ಶಾಲ್ಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿ ನಮ್ಮದು ತುಘಲಕ್ ಮಾದರಿ ಆಡಳಿತ ಎಂಬುದನ್ನು ಸರ್ಕಾರವೇ ಸಾಬೀತು ಪಡಿಸಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಲಭ್ಯತೆ ಮೊದಲಾದ ಪ್ರಮುಖ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳದ ಈ ಸರ್ಕಾರ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆ ಮೂಡಿಸುವ ಕೃತ್ಯಕ್ಕೆ ಕೈಹಾಕಿದೆ. ಇಂತಹ ಮಿತಿ ಮೀರಿದ ಓಲೈಕೆಯಿಂದಲೇ ದೇಶದೆಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕಸದ ಬುಟ್ಟಿ ಸೇರಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.