ಮಂಗಳೂರು: ಮಂಗಳೂರಿನಿಂದ ಮಂತ್ರಾಲಯಕ್ಕೆ ಕೆಎಸ್‌ಆರ್‌ಟಿಸಿಯಿಂದ ನಾಲ್ಕು ನಾನ್ ಎಸಿ ಪಲ್ಲಕ್ಕಿ ಬಸ್‌ಗೆ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ನಾನ್ ಎಸಿ ಪಲ್ಲಕ್ಕಿ ಬಸ್‌ನಲ್ಲಿ ಗ್ರಾಹಕರಿಗಾಗಿ ವಿವಿಧ ಸೌಕರ್ಯಗಳನ್ನು ನೀಡಲಾಗಿದೆ. 30 ಆಸನಗಳುಳ್ಳ ಈ ಬಸ್‌ಗಳಲ್ಲಿ ಅಡ್ವಾನ್‌ಸ್ಡ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್ ಇದೆ. ಫ್ರಂಟ್ ಡ್ಯಾಶ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಕ್ಯಾಮೆರಾ, ಬಸ್‌ಗಳ ಒಳಭಾಗದಲ್ಲಿ ಕ್ಯಾಮೆರಾ, ಆಸನದ ಮೇಲ್ಭಾಗದಲ್ಲಿ ಎಲ್‌ಐಡಿ ಲೈಟ್‌ಗಳು, ಪ್ಯಾನಿಕ್ ಬಟನ್, ಫೈರ್ ಸೇಪ್ಟಿ, ಯುಎಸ್‌ಬಿ ಮತ್ತು ಟೈಪ್ ಸಿ ಮೊಬೈಲ್ ಚಾರ್ಜರ್ ಸೇರಿದಂತೆ ವಿವಿಧ ಸೌಕರ್ಯ ನೀಡಲಾಗಿದೆ ಎಂದರು.‌ ಬಸ್‌ಗೆ ಹಸಿರು ನಿಶಾನೆ ನೀಡಿದ ಬಳಿಕ ಶಾಸಕ ವೇದವ್ಯಾಸ ಕಾಮತ್ ಬಸ್ ಚಲಾಯಿಸಿದರು.

ಮಂಗಳೂರು ನಗರದಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ಹೋಗುವುದಾದರೆ 24 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಇದೀಗ ಕೆಎಸ್ಆರ್‌ಟಿಸಿಯಿಂದ ನಾಲ್ಕು ನಾನ್ ಎಸಿ ಸ್ಲೀಪರ್ ಬಸ್‌ ಮಂತ್ರಾಲಯದೆಡೆಗೆ ಸಂಚಾರ ಆರಂಬಿಸಿದ್ದು, ಈ ಬಸ್ ಕೇವಲ 12 ಗಂಟೆಗಳಲ್ಲಿ ಮಂತ್ರಾಲಯ ತಲುಪಲಿದೆ‌. ಈ ಮೂಲಕ ಮಂತ್ರಾಲಯ ಮಂಗಳೂರಿಗರಿಗಿನ್ನು ಬಹಳ ಹತ್ತಿರವಾಗಲಿದೆ.ಈ ಬಸ್ ಉಡುಪಿ - ಶಿವಮೊಗ್ಗ - ಚಿತ್ರದುರ್ಗ - ಬಳ್ಳಾರಿ - ಅದೋನಿ ಮಾರ್ಗವಾಗಿ ಮಂತ್ರಾಲಯ ತಲುಪಲಿದೆ. ಮಂಗಳೂರಿನಿಂದ 1500 ರು., ಉಡುಪಿಯಿಂದ 1450 ಹಾಗೂ ಕುಂದಾಪುರದಿಂದ 1400 ರು. ಪ್ರಯಾಣ ದರ ಇರಲಿದೆ.