ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೂಟ ಮಹಾಜಗತ್ತು ಸಾಲಿಗ್ರಾಮದ ಮಂಗಳೂರು ಅಂಗ ಸಂಸ್ಥೆ ವತಿಯಿಂದ ನರಸಿಂಹ ಜಪಯಜ್ಞ ಹಾಗೂ ಯುವ ಕೂಟ ಸಮಾಜದ ಬಾಲ ಕಣ್ಮಣಿ ಪುರಸ್ಕಾರ ಸಮಾರಂಭ ಭಾನುವಾರ ಪಾಂಡೇಶ್ವರದಲ್ಲಿನ ಗುರುನರಸಿಂಹ ಸಭಾಭವನದಲ್ಲಿ ನಡೆಯಿತು.ವೇದಮೂರ್ತಿ ಶಿವರಾಮ ಕಾರಂತ್ ನೇತೃತ್ವದಲ್ಲಿ ಜಪಯಜ್ಞ ನಡೆಯಿತು. ಇದಕ್ಕೆ ಪೂರ್ವಾಭಾವಿಯಾಗಿ ನಡೆದ ಜಪಯಜ್ಞದಲ್ಲಿ ಮಂಗಳೂರು ವಲಯದ ಬಾಂಧವರು ದೀಕ್ಷೆ ತೆಗೆದುಕೊಂಡು ಜಪ ನಡೆಸಿದ್ದರು.
ಸಮಾಜದ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಸಂಘಟನೆ ಕೈಗೊಳ್ಳುವುದು ಉತ್ತಮ ಕೆಲಸ. ಇಂತಹ ಕಾರ್ಯಕ್ರಮಕ್ಕೆ ಬರುವ ವೇಳೆ ತಮ್ಮ ಮಕ್ಕಳು ಸೇರಿದಂತೆ ಇಡೀ ಕುಟುಂಬ ಭಾಗವಹಿಸಿ ಕುಟುಂಬದ ಕಾರ್ಯಕ್ರಮವಾಗಬೇಕು ಎಂದು ವೇದಮೂರ್ತಿ ಶಿವರಾಮ ಕಾರಂತ್ ಹೇಳಿದರು.ಸಂಘದ ಅಧ್ಯಕ್ಷ ಶ್ರೀಧರ ಹೊಳ್ಳ ಮಾತನಾಡಿ, ಕೂಟ ಸಮಾಜದ ಸಂಘಟನೆ, ಕೂಟ ಸಮಾಜಕ್ಕೆ ಗುರುನರಸಿಂಹನ ಅನುಗ್ರಹ ಸಿಗಬೇಕು ಎಂಬ ಉದ್ದೇಶದಿಂದ ಕಳೆದ ಎರಡು ವರ್ಷದಿಂದ ಗುರುನರಸಿಂಹ ಜಪಯಜ್ಞವನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಟುವಟಿಕೆಯನ್ನು ಮಾಡಲಾಗುವುದು ಎಂದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರದ ಕರ್ನಾಟಕ ವಿಭಾಗವು ‘ವಿಕಸಿತ ಭಾರತ; ಯುವ ನಾಯಕರ ಸಂವಾದ’ ಎಂಬ ವಿಷಯದಲ್ಲಿ ಮೂರು ಸುತ್ತಿನಲ್ಲಿ ಯಶಸ್ವಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಿದ ಐಸಿರಿ ಐತಾಳ್ ಅವರಿಗೆ ಕೂಟ ಸಮಾಜದ ಬಾಲ ಕಣ್ಮಣಿ ಪುರಸ್ಕಾರ ನೀಡಿ ಗೌರವಿಸಲಾಯಿತು.ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಕೋಶಾಧಿಕಾರಿ ಬಿ.ಸಿ. ಪದ್ಮನಾಭ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಅರುಣ ಐತಾಳ್, ಅನುವಂಶಿಕ ಅರ್ಚಕ ಹರೀಶ್ ಐತಾಳ್, ಪ್ರವೀಣ್ ಮಯ್ಯ, ವೇದಮೂರ್ತಿ ಜಗದೀಶ್ ಐತಾಳ್, ವರ್ಕಾಡಿ ಸುಬ್ರಹ್ಮಣ್ಯ ಮಯ್ಯ, ರವಿ ಹೊಳ್ಳ, ಶಿವರಾಮ ಮಯ್ಯ, ದೀಪಕ್ ಐತಾಳ್ ಮತ್ತು ಡಾ.ರಾಜ್ಯವರ್ಧಿನಿ ಐತಾಳ್, ಕೂಟವಾಣಿ ಪತ್ರಿಕೆಯ ಸಂಪಾದಕರಾದ ಅಡ್ಡೂರು ಕೃಷ್ಣ ರಾವ್, ಸಿಎ ಚಂದ್ರಮೋಹನ್ ಕೆ., ಮ್ಯಾನೇಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಮಹಿಳಾ ಸಂಘಟನೆ ಅಧ್ಯಕ್ಷೆ ಪ್ರಭಾ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಬಾಲಕೃಷ್ಣ ಐತಾಳ್, ಡಾ. ಲೀಲಾ ಉಪಾಧ್ಯಾಯ ಇದ್ದರು.