ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡವು ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಜಯ ಸಾಧಿಸಿದೆ.ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.

ಸಿಎ ಶಾಂತಾರಾಮ ಶೆಟ್ಟಿ- 1005 ಮತ, ಡಾ.ಸುಮನ ಬಿ.- 876, ಡಾ.ಸತೀಶ್ ರಾವ್- 870, ಡಾ. ಬಿ.ಸಚ್ಚಿದಾನಂದ ರೈ- 868, ರಾಘವೇಂದ್ರ ರಾವ್- 844, ಪುಷ್ಪರಾಜ್ ಜೈನ್- 835, ಪಿ.ಬಿ. ಹರಿಪ್ರಸಾದ್ ರೈ- 810, ಯತೀಶ್ ಬೈಕಂಪಾಡಿ- 797, ಸಚೇತ್ ಸುವರ್ಣ- 762, ಗುರುದತ್ ಎಂ. ನಾಯಕ್- 762 ಮತ ಗಳಿಸಿ ಜಯ ಗಳಿಸಿದರು.

ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಗಳಿಗೆ ಫೆ.22ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.

ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು. ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಸೀಲ್ದಾರ್ ರಾಮಚಂದ್ರ ಬಿ. ಕಾರ್ಯ ನಿರ್ವಹಿಸಿದ್ದರು.