ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ‘ಪುಸ್ತಕ ಹಬ್ಬ-2026’ ಆ. 16ರಿಂದ 18ರ ವರೆಗೆ ಮೂರು ದಿನಗಳ ನಗರದ ಸಂಘನಿಕೇತನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ‘ಪುಸ್ತಕ ಹಬ್ಬ-2026’ ಆ. 16ರಿಂದ 18ರ ವರೆಗೆ ಮೂರು ದಿನಗಳ ನಗರದ ಸಂಘನಿಕೇತನದಲ್ಲಿ ನಡೆಯಲಿದೆ.

16 ರಂದು ಬೆಳಗ್ಗೆ 10 ಗಂಟೆಗೆ ಖ್ಯಾತ ಲೇಖಕ, ಕನ್ನಡಪ್ರಭ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌(ಜೋಗಿ) ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿಶ್ವವಿದ್ಯಾಲಯ ಕಲಾ ನಿಕಾಯ ಡೀನ್‌ ಪ್ರೊ.ಸೋಮಣ್ಣ ಹೊಂಗವಳ್ಳಿ ಅತಿಥಿಯಾಗಿ ಭಾಗವಹಿಸುವರು. 18 ರಂದು ಸಂಜೆ 3.30ರಿಂದ ಮುಂಬೈ ವಿವಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ, ಆರ್‌ಎಸ್‌ಎಸ್‌ ಪ್ರಾಂತ ಬೌದ್ಧಿಕ್‌ ಪ್ರಮುಖ್‌ ಕೃಷ್ಣ ಪ್ರಸಾದ್‌ ಬದಿ ಭಾಷಣ ಮಾಡಲಿದ್ದಾರೆ.

16 ರಂದು ಮಧ್ಯಾಹ್ನ 12.15ರಿಂದ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ರಿಂದ ವಿದ್ವಾನ್‌ ಮಹೇಶ್‌ ಪದ್ಯಾಣ, ಬಳಗದಿಂದ ಶಾಸ್ತ್ರೀಯ ಸುಗಮ ಸಂಗೀತ, ಸಂಜೆ 3.30ರಿಂದ ಆಳ್ವಾಸ್‌ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಸಂಜೆ 5.30ರಿಂದ ಎಸ್‌ಡಿಎಂ ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಬೇಂದ್ರ ಅಂದ್ರೆ’ ನಾಟಕ ಪ್ರದರ್ಶನ ನಡೆಯಲಿದೆ.

17ರಂದು ಬೆಳಗ್ಗೆ 10ರಿಂದ ಕಲಾಭಿ ಥಿಯೇಟರ್‌ ಎಕ್ಸ್‌ಪ್ರೆಸ್‌ ಪ್ರಸ್ತುತಿಯಲ್ಲಿ ಅಜ್ಜಿ ಕಥೆಗಳು, ಮಧ್ಯಾಹ್ನ 2 ರಿಂದ ಆಳ್ವಾಸ್‌ ರಂಗಶಾಲೆಯ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ, ಸಂಜೆ 5ರಿಂದ ನಾಡಿನ ಖ್ಯಾತ ಅರ್ಥಧಾರಿಗಳಿಂದ ‘ಶ್ರವಣ ಭಕ್ತ ಪರೀಕ್ಷಿತ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

18ರಂದು ಬೆಳಗ್ಗೆ 10.30ರಿಂದ ಡಾ.ಪಾದೇಕಲ್ಲು ವಿಷ್ಣು ಭಟ್ಟರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಕಥನ ವಿಚಾರಗೋಷ್ಠಿ ನಡೆಯಲಿದೆ. ‘ಭಾರತೀಯ ಮಹಾಕಾವ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ’ ಬಗ್ಗೆ ಡಾ. ವೀಣಾ ಬನ್ನಂಜೆ, ‘ಪ್ರಾಚೀನ ತುಳು ಕಾವ್ಯ ಪರಂಪರೆ ಮತ್ತು ಆಧುನಿಕ ತುಳು ಸಾಹಿತ್ಯ’ ಕುರಿತು ಶ್ರೀಕಾಂತ್‌ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2ರಿಂದ ‘ಮೊಬೈಲ್‌ ಯುಗದಲ್ಲಿ ಪುಸ್ತಕ’ ಬಗ್ಗೆ ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ವಿಜೇತ್‌ ಶೆಟ್ಟಿ ಮಂಜನಾಡಿ, ಪೂರ್ಣಿಮಾ, ಧಾರಿಣಿ ಕುಲಕರ್ಣಿ, ರಂಗನಾಥ ಚಿತ್ರದುರ್ಗ ವಿಚಾರ ಮಂಡಿಸಲಿದ್ದು, ವಿಕಾಸ್‌ರಾಜ್‌ ಪೆರುವಾಯಿ ಸಮನ್ವಯಕಾರರಾಗಿದ್ದಾರೆ. ಸಂಜೆ 6 ರಿಂದ ಕಲಾಭಿ ಥಿಯೇಟರ್‌ ಪ್ರಸ್ತುತಿಯಲ್ಲಿ ಮಾರಿ ಕಾಡು ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಈ ಪುಸ್ತಕ ಹಬ್ಬದಲ್ಲಿ ಗ್ರ್ಯಾಂಡ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾತ್ರವಲ್ಲ ರಾಜ್ಯದಾದ್ಯಂತ ಪ್ರಸಿದ್ಧ ಕವಿಗಳು ಮತ್ತು ಖ್ಯಾತ ಬರಹಗಾರರನ್ನು ಭೇಟಿ ಮಾಡುವ ಅವಕಾಶ ಲಭಿಸಲಿದೆ.

ಯಾಕಾಗಿ ಪುಸ್ತಕ ಹಬ್ಬ?

ಪ್ರಸಕ್ತ ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಸಾಮಾಜಿಕ ಪರಿವರ್ತನೆಗೆ, ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು, ವೈಜ್ಞಾನಿಕ ಜಾಗೃತಿಯನ್ನು ಬೆಳೆಸಲು, ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು, ಇತಿಹಾಸವನ್ನು ಅಧ್ಯಯನ ಮಾಡಲು ಮತ್ತು ಮಾನವ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಸಾಹಿತ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಕೇಂದ್ರ ಕಳೆದ ಐದು ದಶಕಗಳಿಂದ ಮಂಗಳೂರಿನಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದೆ.