ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗವು ಬೆಂಗಳೂರಿನ ಮೇಕ್-ಎ-ವಿಶ್ ಫೌಂಡೇಶನ್‌ನ ಸಹಯೋಗದೊಂದಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ಮಕ್ಕಳ ಮುಖದಲ್ಲಿ ನಗು ತರಿಸುವುದಕ್ಕಾಗಿ, ಅವರ ಆಸೆಗಳನ್ನು ಈಡೇರಿಸುವ ಕಾರ್ಯಕ್ರಮವನ್ನು ಆಯೋಜಿಸಿತು

ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗವು ಬೆಂಗಳೂರಿನ ಮೇಕ್-ಎ-ವಿಶ್ ಫೌಂಡೇಶನ್‌ನ ಸಹಯೋಗದೊಂದಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ಮಕ್ಕಳ ಮುಖದಲ್ಲಿ ನಗು ತರಿಸುವುದಕ್ಕಾಗಿ, ಅವರ ಆಸೆಗಳನ್ನು ಈಡೇರಿಸುವ ಕಾರ್ಯಕ್ರಮವನ್ನು ಆಯೋಜಿಸಿತುಅಮೆರಿಕಾದ ಅರಿಜೋನಾ ಫೀನಿಕ್ಸ್‌ನಿದ ಜಾಗತಿಕವಾಗಿ ಗುರುತಿಸಲ್ಪಟ್ಟ ಲಾಭರಹಿತ ಸಂಸ್ಥೆ ಮೇಕ್-ಎ-ವಿಶ್ ಫೌಂಡೇಶನ್ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಮನಸ್ಸನ್ನು ಸಂತೋಷಗೊಳಿಸುವುದಕ್ಕಾಗಿ ತನ್ನ ಅಂತರರಾಷ್ಟ್ರೀಯ ಜಾಲದ ಮೂಲಕ 50 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 75 ಮಕ್ಕಳಿಗೆ ಅವರ ಆಯ್ಕೆಯ ಸುಮಾರು 10 ಲಕ್ಷ ರು. ಮೊತ್ತದ ಉಡುಗೊರೆಗಳನ್ನು ನೀಡಿ ಅವರನ್ನು ಸಂತಸಗೊಳಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಡಿಜಿಟಲ್ ಕ್ರಿಯೇಟರ್ ಶರಣ್ ಚಿಲಿಂಬಿ ಅವರು, ಅನಾರೋಗ್ಯದ ವಿರುದ್ಧದ ಹೋರಾಟದಲ್ಲಿ ದಯೆ, ಸಹಾನುಭೂತಿ ಮತ್ತು ಸಮುದಾಯ ಬೆಂಬಲದ ಮಹತ್ವವನ್ನು ಒತ್ತಿ ಹೇಳಿದರು. ಕನ್ನಡ ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಅನಾರೋಗ್ಯ ಪೀಡಿತ ಮಕ್ಕಳಿಗೆ ತಮ್ಮ ಬೆಂಬಲವನ್ನು ಹಂಚಿಕೊಂಡರು, ಮಕ್ಕಳು ಮತ್ತು ಅವರ ಕುಟುಂಬಗಳನ್ನು ತಮ್ಮ ಮಾತುಗಳಿಂದ ಮನರಂಜಿಸಿ ಪ್ರೋತ್ಸಾಹಿಸಿದರು. ಕೆಎಂಸಿ ಡೀನ್ ಡಾ. ಅನಿಲ್ ಕೆ. ಭಟ್, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮೇಕ್-ಎ-ವಿಶ್ ಫೌಂಡೇಶನ್ ಪ್ರತಿನಿಧಿ ಎ. ಬಿ. ಬಾಸ್ಕೋ ಉಪಸ್ಥಿತರಿದ್ದರು. ಮಕ್ಕಳ ಅಂಕೋಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಸ್ವಾಗತಿಸಿ ಈ ಉಪಕ್ರಮದ ಮಹತ್ವದ ಕುರಿತು ಮಾತನಾಡಿದರು. ಡಾ. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಧನ್ಯವಾದಗಳನ್ನು ಅರ್ಪಿಸಿದರು.