ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಾಲ್ಯ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ, ಮಕ್ಕಳ ಕ್ಯಾನ್ಸರ್ ವಿಭಾಗವು ವಿಂಗ್ಸ್ ಆಫ್ ಹೋಪ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿತು.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬಾಲ್ಯ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ, ಮಕ್ಕಳ ಕ್ಯಾನ್ಸರ್ ವಿಭಾಗವು ವಿಂಗ್ಸ್ ಆಫ್ ಹೋಪ್ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿತು.

ಭರವಸೆ, ಶಕ್ತಿ ಮತ್ತು ನಗು ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮದಲ್ಲಿ ಸುಮಾರು 65 ಬಾಲ್ಯ ಕ್ಯಾನ್ಸರ್‌ನಿಂದ ಗುಣಮುಖರಾದ ಧೀರ ಮಕ್ಕಳನ್ನು ಅವರ ಪೋಷಕರೊಂದಿಗೆ ಗೌರವಿಸಲಾಯಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ನಟಿ ರೂಪಶ್ರೀ ವರ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗುಣಮುಖರಾದ ಮಕ್ಕಳು ಮತ್ತವರ ಕುಟುಂಬಗಳೊಂದಿಗೆ ಆತ್ಮೀಯವಾಗಿ ಬೆರೆತರು, ಕಸ್ತೂರ್ಬಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಈ ಪುಟ್ಟ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ನಿಜಕ್ಕೂ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ ಎಂದರು.ಮಕ್ಕಳ ಪರವಾಗಿ ಐಶ್ವರ್ಯ ಹಾಗೂ ಪೋಷಕರ ಪರವಾಗಿ ಶ್ವೇತಾ ಅವರು ಮಕ್ಕಳ ಕ್ಯಾನ್ಸರ್ ವಿಭಾಗ ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸಲು ನಮ್ಮ ಬಳಿ ಪದಗಳೇ ಸಾಲದು ಎಂದರು.ಸ್ಮೃತಿ ಗೋಡೆ ಅನಾವರಣ: ಮಾಹೆ, ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅಧ್ಯಕ್ಷತೆ ವಹಿಸಿದ್ದರು. ಸ್ಮೃತಿ ಗೋಡೆಯನ್ನು ಅನಾವರಣಗೊಳಿಸಲಾಯಿತು. ಗುಣಮುಖರಾದ ಮಕ್ಕಳು ತಮ್ಮ ಪೋಷಕರೊಂದಿಗೆ ನಗುಮೊಗದಿಂದಿರುವ ಚಿತ್ರಗಳನ್ನು ಮತ್ತು ಅವರ ಕಥೆಗಳನ್ನು ಈ ಗೋಡೆ ಪ್ರದರ್ಶಿಸಿತು.

ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ನ ನಿರ್ದೇಶಕಿ ಡಾ. ಸೀಮಾ ರಾಜೇಶ್ ರಾವ್, ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ., ಮತ್ತು ಮಕ್ಕಳ ಕ್ಯಾನ್ಸರ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಎಮಿನ್ ಎ. ರಹಿಮಾನ್ ಅವರು ಉಪಸ್ಥಿತರಿದ್ದರು. ಮಕ್ಕಳ ಕ್ಯಾನ್ಸರ್ ವಿಭಾಗದ ಡಾ. ಅರ್ಚನಾ ಸ್ವಾಗತಿಸಿ, ಡಾ. ಸ್ವಾತಿ ವಂದಿಸಿದರು, ಡಾ. ಚೈತ್ರ ವೆಂಕಟೇಶ್ ನಿರೂಪಿಸಿದರು.