ಹಿರಿಯ ನಾಗರಿಕರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಹೊಸ ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯ ಆರಂಭಿಸಿದೆ.

ಮಣಿಪಾಲ: ಹಿರಿಯ ನಾಗರಿಕರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ಹೊಸ ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯ ಆರಂಭಿಸಿದೆ. ವಯಸ್ಸಾದಂತೆ ಖಿನ್ನತೆ, ಆತಂಕ, ಜ್ಞಾಪಕ ಶಕ್ತಿ ಕುಂಠಿತ ಹಾಗೂ ಇತರ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರಿಗಾಗಿ ಈ ಚಿಕಿತ್ಸಾಲಯ ಮೀಸಲಾಗಿದೆ. ಇಲ್ಲಿನ ವೈದ್ಯರು ಹಿರಿಯ ನಾಗರಿಕರಲ್ಲಿ ಕಂಡುಬರುವ ಮನೋವೈದ್ಯಕೀಯ ಸಮಸ್ಯೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಇದರೊಂದಿಗೆ ಸೌಮ್ಯ ಮನೋಗ್ರಹಿಕೆ ದೌರ್ಬಲ್ಯ ಹಾಗೂ ಬುದ್ಧಿಮಾಂದ್ಯದಂತಹ ಸ್ಥಿತಿಗಳಿಗೂ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಮತ್ತು ಅವರ ಕುಟುಂಬದವರು ಸಲಹೆ, ರೋಗ ನಿರ್ಣಯ ಹಾಗೂ ಚಿಕಿತ್ಸೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಪಡೆಯಬಹುದು.ವೃದ್ಧಾಪ್ಯದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಸೂಕ್ತ ತಪಾಸಣೆ, ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರದ ಮೂಲಕ ಜ್ಞಾಪಕ ಶಕ್ತಿ ಕುಂಠಿತವಾಗುವುದನ್ನು ನಿಧಾನಗೊಳಿಸಬಹುದು, ಖಿನ್ನತೆ ಹಾಗೂ ಆತಂಕವನ್ನು ಕಡಿಮೆ ಮಾಡಬಹುದು ಮತ್ತು ಹಿರಿಯ ನಾಗರಿಕರು ತಮ್ಮ ದೈನಂದಿನ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗಬಹುದು ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ರೋಗಿಗಳು ಮತ್ತು ಅವರ ಕುಟುಂಬದವರು ಪ್ರತಿ ಶುಕ್ರವಾರ ಮಧ್ಯಾಹ್ನ 2.30 ರಿಂದ ಆಸ್ಪತ್ರೆಯ ಮನೋವೈದ್ಯಕೀಯ ಹೊರರೋಗಿ ವಿಭಾಗದಲ್ಲಿ ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0820 2922761 ಅನ್ನು ಸಂಪರ್ಕಿಸಬಹುದು.