ಮಣಿಪಾಲ : ಇಲ್ಲಿನ ಮಾಹೆ ವಿ.ವಿ.ಯ ಅಂಗಸಂಸ್ಥೆ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎಂಐವಿ) ಹಾಗೂ ಪುಣೆಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಜಂಟಿಯಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ವೈರೋಗ್ಲೋಬಲ್ 2026’ ಅಂತಾರಾಷ್ಟ್ರೀಯ ಸಮ್ಮೇಳನವು ಎಂಐವಿಯ ನಿರ್ದೇಶಕ ಡಾ. ಚಿರಂಜಯ್ ಮುಖೋಪಾಧ್ಯಾಯ ಹಾಗೂ ಪುಣೆಯ ಐಸಿಎಂಆರ್- ಎನ್ಐವಿಯ I ನಿರ್ದೇಶಕ ಡಾ.ನವೀನ್ ಕುಮಾರ್ ಅಧ್ಯಕ್ಷತೆಯಲ್ಲಿ ಜರುಗಿತು.
ಸಮ್ಮೇಳನವನ್ನು ಉದ್ಘಾಟಿಸಿದ ನವದೆಹಲಿಯ ಐಸಿಎಂಆರ್ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ, ಹಿರಿಯ ವಿಜ್ಞಾನಿ ಡಾ. ನಿವೇದಿತಾ ಗುಪ್ತಾ, ಕೇವಲ ಒಂದು ನಿರ್ದಿಷ್ಟ ವೈರಾಣುವನ್ನು ಪತ್ತೆಹಚ್ಚುವ ಪರೀಕ್ಷೆಗಳ ಬದಲಿಗೆ, ರೋಗದ ಲಕ್ಷಣಗಳ ಆಧಾರದ ಮೇಲೆ ಸಮಗ್ರವಾಗಿ ಪರೀಕ್ಷಿಸುವ ‘ಸಿಂಡೋಮಿಕ್ ವಿಧಾನ’ ಅಳವಡಿಸಿಕೊಳ್ಳಬೇಕಿದೆ. ನಮ್ಮ ದೇಶದಲ್ಲೇ ತಯಾರಿಸಿದ, ಕೈಗೆಟುಕುವ ದರದಲ್ಲಿ, ತ್ವರಿತ ಫಲಿತಾಂಶ ನೀಡುವ ರೋಗನಿರ್ಣಯ ಸಾಧನಗಳನ್ನು (ಪಾಯಿಂಟ್-ಆಫ್-ಕೇರ್ ಡಯಾಗ್ನಸ್ಟಿಕ್ಸ್) ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮಾಹೆ ಕುಲಪತಿ ಲೆಜ (ಡಾ.) ಎಂ. ಡಿ. ವೆಂಕಟೇಶ್, ಸಹ ಕುಲಪತಿ ಡಾ. ಶರತ್ ಕೆ. ರಾವ್, ಸಮ್ಮೇಳನದ ಸಹಸಂಘಟನಾ ಕಾರ್ಯದರ್ಶಿ ಮುಂಬೈ ಐಸಿಎಂಆರ್-ಎನ್ಐವಿ ಘಟಕದ ಪ್ರಭಾರಿ ಅಧಿಕಾರಿ ಮತ್ತು ವಿಜ್ಞಾನಿ ಡಾ. ಶೈಲೇಶ್ ಡಿ. ಪವಾರ್ ಹಾಗೂ ಎಂಐವಿ ಸಹ-ಪ್ರಾಧ್ಯಾಪಕಿ ಡಾ. ಅನಿತಾ ಜೆ. ಹಾಗೂ ಜಗತ್ತಿನ ಪ್ರಮುಖ ವೈರಾಣು ತಜ್ಞರು ಭಾಗವಹಿಸಿದ್ದರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಡಾ. ದೀಪಾ ಶರ್ಮಾ ಅವರು ಪೋಲಿಯೋ ನಿರ್ಮೂಲನೆಯ ಯಶಸ್ಸು, ದಡಾರ ಮತ್ತು ರುಬೆಲ್ಲಾ ರೋಗಗಳನ್ನು ತಡೆಯುವ ಗುರಿಗಳ ಬಗ್ಗೆ, ಮೆರ್ಕ್ ಸಂಸ್ಥೆಯ ಡಾ. ಸೌಮ್ಯ ಚಟರ್ಜಿ ಅವರು ಡೆಂಘೀ ಲಸಿಕೆಗಳ ಆವಿಷ್ಕಾರ, ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ಡಾ. ರೋಜರ್ ಹೂಸನ್ ಅವರು ಉಣ್ಣೆಗಳಿಂದ ಹರಡುವ ವೈರಾಣುಗಳನ್ನು ತಂತ್ರಜ್ಞಾನದ ಮೂಲಕ ಪತ್ತೆಹಚ್ಚುವ ವಿಧಾನ, ಭಾರತ್ ಬಯೋಟೆಕ್ ಡಾ. ಕರ್ ಮುತ್ತುಮಣಿ ಅವರು ಜಾಗತಿಕ ವೈರಾಣು ಭೀತಿಗಳನ್ನು ಎದುರಿಸುವಲ್ಲಿ ‘ನ್ಯೂಕ್ಲಿಯಿಕ್ ಆಸಿಡ್’ ಆಧಾರಿತ ಲಸಿಕೆಗಳ ಶಕ್ತಿ ಮತ್ತು ಪ್ರಾಮುಖ್ಯತೆಗಳ ಬಗ್ಗೆ ಮಾತನಾಡಿದರು.ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ನವೀನ್ ಕುಮಾರ್ ಮತ್ತು ಡಾ. ಚಿರಂಜಯ್ ಮುಖೋಪಾಧ್ಯಾಯ ಅವರು, ‘ರೋಗನಿರ್ಣಯ ಕ್ಷೇತ್ರದಲ್ಲಿ ಒಂದು ಸಮಗ್ರ ಮತ್ತು ಸಂಯೋಜಿತ ವಿಧಾನದ ಅಗತ್ಯವಿದೆ. ಹೆಚ್ಚುತ್ತಿರುವ ಮತ್ತು ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ವೈರಾಣು ಸವಾಲುಗಳನ್ನು ಎದುರಿಸಲು ವೈರಲ್ ರಿಸರ್ಚ್ ಅಂಡ್ ಡಯಾಗೋಸ್ಟಿಕ್ ಲ್ಯಾಬೊರೆಟರೀಸ್ ಮತ್ತು ಜಾಗತಿಕ ಸಹಯೋಗ ನೆರವಾಗಿದೆ’ ಎಂದು ಹೇಳಿದರು.