ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆಯ ಅಂಗಸಂಸ್ಥೆ ಎಂಐಟಿಯ ಎನ್ಎಸ್ಎಸ್ ಘಟಕಗಳು ಇತ್ತೀಚೆಗೆ ‘ನಮ್ಮ ಶಕ್ತಿ, ನಮ್ಮ ಗ್ರಹ’ ಎಂಬ ಧ್ಯೇಯವಾಕ್ಯದೊಂದಿದೆ ವಿಶ್ವ ಭೂದಿನ 2025ನ್ನು ಬಹಳ ಉತ್ಸಾಹದಿಂದ ಆಚರಿಸಿದವು.ಈ ಧ್ಯೇಯವಾಕ್ಯವು ನವೀಕರಿಸಬಹುದಾದ ಶಕ್ತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ ಮತ್ತು 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು 3 ಪಟ್ಟು ಹೆಚ್ಚಿಸಲು ಜಾಗತಿಕ ಪ್ರಯತ್ನಗಳಿಗೆ ಕರೆ ನೀಡುತ್ತದೆ.ಮಾಹೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿರಾಜ್ ನೀಲಾವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ತಾಪಮಾನವನ್ನು ಪರಿಹರಿಸುವ ತುರ್ತು ಅಗತ್ಯ ಒತ್ತಿ ಹೇಳಿದರು. ಹಸಿರು ಪರಿಸರ ಉತ್ತೇಜಿಸಲು ಸಸಿಗಳನ್ನು ನೆಡಲು ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳನ್ನು ಪ್ರತಿಜ್ಞೆ ಮಾಡುವಂತೆ ಅವರು ಪ್ರೋತ್ಸಾಹಿಸಿದರು. ಸಂಪನ್ಮೂಲ ವ್ಯಕ್ತಿ ಡಾ. ಮೂರ್ತಿ ಧರ್ಮಪುರ ಅವರು, ನೈಸರ್ಗಿಕ ಸಂಪನ್ಮೂಲಗಳು, ಪರಿಸರ ವ್ಯವಸ್ಥೆಗಳು ಮತ್ತು ನವೀನ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ‘ಭೂಮಿ ಮತ್ತು ಶಕ್ತಿ’ ಕುರಿತು ಭಾಷಣ ಮಾಡಿದರು.ಎಂಐಟಿ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ತಮ್ಮ 30 ವರ್ಷಗಳ ಅನುಭವ ಮತ್ತು ಅವಲೋಕನಗಳನ್ನು ಹಂಚಿಕೊಂಡರು. ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವ ಅಗತ್ಯ ಒತ್ತಿ ಹೇಳಿದರು. ಸಿವಿಲ್ ಎಂಜಿನಿಯರಿಂಗ್ ಮುಖ್ಯಸ್ಥ ಡಾ. ಪುರುಷೋತ್ತಮ ಸರ್ವದೆ ಸ್ವಾಗತಿಸಿ, ಭೂ ದಿನಾಚರಣೆಯ ಬಗ್ಗೆ ಒಳನೋಟಗಳನ್ನು ನೀಡಿದರು.ಉಪನ್ಯಾಸಕಿ ಪ್ರೊ. ಧನಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪೂರ್ಣಿಮಾ ಭಾಗವತ್, ಪ್ರೊ. ಪ್ರಸನ್ನ ಕುಮಾರ್ ಮತ್ತು ಸಿವಿಲ್ ವಿಭಾಗದ ಪ್ರೊ. ಸಂದೀಪ್ ಜಿ.ಎಸ್. ಕಾರ್ಯಕ್ರಮ ಸಂಯೋಜಿಸಿದರು. ಎಂಎಸ್ಸಿ ಭೂವಿಜ್ಞಾನ, ಎಂಟೆಕ್ ಮತ್ತು ಎಂಐಟಿಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಡಾ. ಹರ್ಷಿಣಿ ದಾಸರಿ ವಂದಿಸಿದರು.