ಸಾರಾಂಶ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಸಿಓಡಿಎಸ್) ಇದರ 2025ನೇ ಸಾಲಿನ ಕಾಲೇಜು ದಿನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ. ಟಿ.ಎಂ.ಎ ಪೈ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (ಎಂಸಿಓಡಿಎಸ್) ಇದರ 2025ನೇ ಸಾಲಿನ ಕಾಲೇಜು ದಿನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ. ಟಿ.ಎಂ.ಎ ಪೈ ಸಭಾಂಗಣದಲ್ಲಿ ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ. ಅದಿತಿ ಚೋಪ್ರಾ ಅತ್ಯುತ್ತಮ ಸಂಶೋಧನೆಗಾಗಿ ಡಾ. ಟಿಎಂಎ ಪೈ ಚಿನ್ನದ ಪದಕವನ್ನು ಪಡೆದರು. ಡಾ. ಚಾರ್ವಿ ಬನ್ಸಾಲ್ ಅವರಿಗೆ 2024-25ರ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿಗಾಗಿ ಡಾ. ಸುಂದರ್ ಜೆ. ವಜಿರಾಣಿ ಸ್ಮಾರಕ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ಗಮನ ವಿದ್ಯಾರ್ಥಿಗಳಿಗೆ ಔಪಚಾರಿಕವಾಗಿ ಪದವಿ ಪ್ರದಾನ ಮಾಡಲಾಯಿತು ಮತ್ತು ವೃತ್ತಿಪರ ಪ್ರಮಾಣವಚನವನ್ನು ಬೋಧಿಸಲಾಯಿತು.ಸಮಾರಂಭದ ಮುಖ್ಯ ಭಾಷಣ ಮಾಡಿದ ಮಾಹೆಯ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿ ಡಾ. ಶರತ್ ಕೆ. ರಾವ್, ಆರೋಗ್ಯ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರತಿಭೆ ಮತ್ತು ಆಳವಾದ ಸಾಮಾಜಿಕ ಸೇವಾ ಪ್ರಜ್ಞೆಗಳಿಂದಷ್ಟೇ ಸಾಧನೆ ಸಾಧ್ಯ. ಮಾಹೆಯು ಶಿಕ್ಷಣ ಮತ್ತು ಸಂಶೋಧನೆಗೆ ದಾರಿದೀಪವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ ಎಂದರು.ಎಂಸಿಓಡಿಎಸ್ ಡೀನ್ ಡಾ. ಗೋಪಾಲಕೃಷ್ಣನ್ ಧರ್ಮರಾಜನ್, ಸಂಸ್ಥೆಯು ತನ್ನ ವಜ್ರ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಜ.2ರಿಂದ 4ರ ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ತಿಳಿಸಿದರು.ಸಹಾಯಕ ಡೀನ್ಗಳಾದ ಡಾ. ಶಶಿ ರಶ್ಮಿ ಆಚಾರ್ಯ ಮತ್ತು ಡಾ. ಶ್ರೀಕಾಂತ್ ಜಿ. ಕಾರ್ಯಕ್ರಮ ಸಂಯೋಜಿಸಿದರು. ಮಣಿಪಾಲ ಮತ್ತು ಮಂಗಳೂರು ಮಾಹೆ ಕ್ಯಾಂಪಸ್ಗಳ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.