ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಬಾರೆ ಹಿಲ್ಸ್ಗೆ ಹೊಂದಿಕೊಂಡಿರುವ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾದಗರಿ ಜಿಲ್ಲೆಯ ರಂಗಂಪೇಟೆಯ ಗುರುಬಾಯಿ (52) ಎಂಬುವವರ ಅಂಡಾಶಯಕ್ಕೆ ಬೆಳೆದಿದ್ದ 5 ಕೆಜಿ, ಸವಾಲಿನ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ.5 ದಿನಗಳ ಹಿಂದೆಯೇ ಈ ಸರ್ಜರಿಗೆ ಒಳಗಾಗಿರುವ ಗುರುಬಾಯಿ ಸದ್ಯ ಸಂಪೂರ್ಣ ಗುಣಮುಖಳಾಗಿದ್ದು, ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾಳೆ. ಹೊಟ್ಟೆನೋವೆಂದು ಬಂದಿದ್ದ ಗುರುಬಾಯಿ ಹೊಟ್ಟೆಯ ಅಂಡಾಶಯದಲ್ಲಿ 5 ಕೆಜಿ ಗಡ್ಡೆ ಇರೋದು ಎಂಆರ್ಐ ಸ್ಕ್ಯಾನಿಂಗ್ ಸೇರಿದಂತೆ ಅನೇಕ ಪರೀಕ್ಷೆಗಳಲ್ಲಿ ಖಚಿತವಾದಾಗ ಇಲ್ಲಿನ ಮಹಿಳೆಯರ ಕ್ಯಾನ್ಸರ್ ಸರ್ಜನ್ ಡಾ. ಸುಮಯ್ಯಾ ಸನಾ ಇವರ ನೇತೃತ್ವದ ವೈದ್ಯರ ತಂಡ ಈ ಸವಾಲಿನ ಆಪರೇಶನ್ ಯಶಸ್ವಿಯಾಗಿ ಮಾಡಿದೆ ಎಂದು ಆಸ್ಪತ್ರೆ ಮುಖ್ಯ ವೈದ್ಯ ಡಾ. ಫಾರೂಕ್ ಮಣ್ಣೂರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಫಾರೂಕ್, 50 ವರ್ಷದ ನಂತರ ಮಹಿಳೆಯರು ತಮ್ಮ ದೇಹದಲ್ಲಾಗುತ್ತಿರುವ ರಕ್ತಸ್ರಾವ, ಇತ್ಯಾದಿ ಬದಲಾವಣೆಗಳ ಮೇಲೆ ನಿಗಾ ಇಡಬೇಕು, ಹೊಟ್ಟೆಯಲ್ಲಿ ನೋವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಗುರುಬಾಯಿ ಹೊಟ್ಟೆಯಲ್ಲಿ 5 ಕೆಜಿ ಗಡ್ಡೆ ಬೆಳೆದರೂ ಅವರಿಗೆ ಗೊತ್ತಾಗಿಲ್ಲ, ಅದು ಹೊಟ್ಟೆಯಲ್ಲಿ ತಿರುಗಿದಾಗ ನೋವಾಗುತ್ತದೆ. ಹಾಗಾದಾಗ ಆಸ್ಪತ್ರೆಗೆ ಬಂದಿದ್ದಾರೆ. ಸರಿಯಾದ ಸಮಯಕ್ಕೆ ಬಂದಿದ್ದರಿಂದ ಆಪರೇಷನ್ ಯಶ ಕಂಡಿದೆ, 1 ಲಕ್ಷ ಜನರಲ್ಲಿ 7 ಮಂದಿಗೆ ಈ ಸಮಸ್ಯೆ ಕಾಡುತ್ತದೆ. ಹಾಗೇ ಬಿಟ್ಟರೆ 3 ನೇ, 4 ನೇ ಹಂತಕ್ಕೆ ತಿರುಗಿ ಪ್ರಾಣಕ್ಕೂ ಅಪಾಯವೆಂದು ಡಾ. ಫಾರೂಕ್ ಹೇಳಿದರು.ಕ್ಯಾನ್ಸರ್ನಲ್ಲಿರುವ ಹಲವು ವಿಧಗಳಲ್ಲಿ ಅಂಡಾಶಯ ಕ್ಯಾನ್ಸರ್ ಕೂಡ ಒಂದು. ಇದಕ್ಕೆ ಯಾವುದೇ ಲಕ್ಷಣಗಳು ಕಂಡು ಬರೋದಿಲ್ಲ. ಗಡ್ಡೆ ಹೊಟ್ಟೆಯಲ್ಲಿ ತಿರುಗಿದಾಗ ನೋವಾಗುತ್ತದೆ. ಆಗ ವೈದ್ಯರನ್ನು ಕಾಣಲೇಬೇಕು, ಮಹಿಳೆಯರು ತಮ್ಮ ಮಾಸಿಕ ಪಿರಿಯಡ್ ಇತ್ಯಾದಿಗಳಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಆದರೂ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವಂತೆ ಡಾ. ಫಾರೂಕ್ ಸಲಹೆ ನೀಡಿದರು.
ಅರವಳಿಕೆ ತಜ್ಞ ಡಾ. ಸತೀಶ ಶರಣಪ್ಪ, ಪ್ಯಾಥೋಲಜಿಸ್ಟ್ ಡಾ. ಜೀನತ್, ಡಾ. ಇಸ್ಮಾಯಿಲ್ ಚಾಂದ್, ನಿಕಿ ಪವಾರ್ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.ಸವಾಲಿನ 4 ಗಂಟೆ ಸರ್ಜರಿ: ಡಾ. ಸುಮಯ್ಯಾ ಸಮಾ
ಗುರುಬಾಯಿ ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಾಗ ತಕ್ಷಣ ಎಂಆರ್ಐ ಸ್ಕ್ಯಾನ್ನಲ್ಲಿ ಗಡ್ಡೆ ಪತ್ತೆಯಾಗಿತ್ತು. ಕ್ಯಾನ್ಸರ್ ಎಂದು ಶಂಕಿಸಿ ಸರ್ಜರಿಗೆ ಮುಂದಾದ್ವಿ. ಗಡ್ಡೆ ದೊಡ್ಡದಾಗಿ ಮೂತ್ರಾಶಯ, ರಕ್ತನಾಳ, ಕರಳು ಎಲ್ಲಾಕಡೆ ಅಂಟಿತ್ತು. ಆಪರೇಶನ್ ಸವಾಲಿನದಾಗಿತ್ತು. ಜನರಲ್ ಅನಸ್ತೇಶಿಯಾ ಕೊಟ್ಟು ನಡೆಸುವ ಸರ್ಜರಿ ಆಗಿದ್ದರಿಂದ ಪ್ರತಿ ಹಂತವೂ ಎಮರ್ಜೆನ್ಸಿ ಆಗಿತ್ತು. ಎಲ್ಲವನ್ನು ನಮ್ಮ ತಂಡ ಸಮರ್ಥವಾಗಿ ನಿಭಾಯಿಸಿ ಗುರುಬಾಯಿಗೆ ಮರುಜನ್ಮ ನೀಡಲಾಗಿದೆ ಎಂದು ಸ್ತ್ರೀರೋಗ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಸುಮಯ್ಯಾ ಸಮಾ ಹೇಳಿದರು. ಗುರುಬಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತನ್ನ ಜೀವ ಉಳಿಸಿದ ಮಣ್ಣೂರ ಆಸ್ಪತ್ರೆ ವೈದ್ಯರಿಗೆಲ್ಲರಿಗೂ ತಾವು ಚಿರಋಣಿ ಎಂದು ಕೈ ಜೋಡಿಸಿದರು.