ಕುಶಾಲನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶನೀಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಮೀಪ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಕುಶಾಲನಗರ: ಮಹಿಳೆಯರು ಸರ್ಕಾರದ ಮತ್ತು ಸಂಘ ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಕರೆ ನೀಡಿದ್ದಾರೆ. ಅವರು ಕುಶಾಲನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮೂಹಿಕ ವರ ಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶನೀಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಮೀಪ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ. ಶಿಕ್ಷಣ ಶಾಶ್ವತ ಆಸ್ತಿಯಾಗಿದ್ದು ಆ ಮೂಲಕ ಜೀವನದ ಗುರಿ ತಲುಪಲು ಸಾಧ್ಯ ಎಂದರು.

ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಕಷ್ಟು ಯೋಜನೆಗಳು ಸಮಾಜದ ಬಹುತೇಕ ಜನರಿಗೆ ಸಹಕಾರಿಯಾಗಿದ್ದು ಮಹಿಳೆಯರು ಆರ್ಥಿಕ ಸಬಲೀಕರಣ ಹೊಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೂಲಕ ಮಹಿಳೆಯರ ಬದುಕಿನ ಬಲವರ್ಧನೆ ಸಾಧ್ಯವಾಗಿದೆ ಎಂದರು.

ಕ್ಷೇತ್ರ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ ಸಾಲಿಯಾನ್ ಅವರು ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು. ಪೂಜೆ ಪುರಸ್ಕಾರಗಳ ಮೂಲಕ ಶಾಂತಿ ನೆಮ್ಮದಿ ಗಳಿಸಲು ಸಾಧ್ಯ ಎಂದರು.

ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀ ದಿವ್ಯ ಸಾನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಾದ ನೀಡಿದ ಶ್ರೀಗಳು ಮಹಿಳೆಯರು ಶಿಕ್ಷಣದ ಆರ್ಥಿಕ ಸಬಲತೆ ಗಳಿಸುವುದರೊಂದಿಗೆ ಮಾನಸಿಕ ಸದೃಢತೆ ಹೊಂದುವಂತಾಗಬೇಕು ಎಂದರು.

ವರಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಎಂ ಬಿ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ ಮಾಜಿ ಅಧ್ಯಕ್ಷರಾದ ಬಿ ಜಿ ಮಂಜುನಾಥ್ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯರಾದ ಎಂ ಎನ್ ಚಂದ್ರಮೋಹನ್ ಪುರಸಭಾ ನಾಮ ನಿರ್ದೇಶಕ ಸದಸ್ಯರಾದ ಎಂ ಎಂ ಪ್ರಕಾಶ್ ಬಿ ಜಿ ಜಗದೀಶ್ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗೋವಿಂದಪ್ಪ ಶನೇಶ್ವರ ದೇವಾಲಯ ಅಧ್ಯಕ್ಷ ಜಿ ಜಿ ಮಂಜಪ್ಪ ಉಪಾಧ್ಯಕ್ಷರುಗಳಾದ ಮಂಜುಳಾ ದಿವಾಕರ್ ಮಲ್ಲಿಗೆ ತಿಮ್ಮಪ್ಪ ಕಾರ್ಯದರ್ಶಿ ಪವಿತ್ರಾಕ್ಷಿ ಕೋಶಾಧಿಕಾರಿ ಡಿ ಎಸ್ ಹರೀಶ್ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಪೂಜಾ ಸಮಿತಿಯ ಸದಸ್ಯರಾದ ಎಂ ಕೆ ದಿನೇಶ್, ಮಧು ಕುಮಾರ್ ಡಿ ಎಸ್ ಯೋಗೇಶ್ ದಿನೇಶ್ ಕುಮಾರ್ ಪಾರ್ವತಿ ರಾಧಾ ಮತ್ತಿತರರು ಇದ್ದರು.

ಕ್ಷೇತ್ರ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗ ಸ್ವಾಗತಿಸಿದರು. ಅರ್ಚಕರಾದ ಕೆ ಗೌಡಯ್ಯ ಮತ್ತು ರಾಮ ನಾಯಕ ದಂಪತಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.