ಸಾರಾಂಶ
ಕನ್ನಡಪ್ರಭ ವಾರ್ತೆ ಮಾನ್ವಿ
ಪರಮಾಣು ವಿದ್ಯುತ್ ತಯಾರಿಕ ಕೇಂದ್ರದಲ್ಲಿ ರಕ್ಷಣೆ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಕೈಯಲಿರುವ ಬಂದೂಕಿನಿಂದ ಗುಂಡು ಸಿಡಿದು ಪಟ್ಟಣದ ಆರ್.ಜಿ. ಕ್ಯಾಂಪ್ನ ನಿವಾಸಿ ಯೋಧ ವೈ.ರವಿಕಿರಣ್ (37) ಮೃತಪಟ್ಟಿದ್ದು, ಕುಟುಂಬಸ್ಥರು ಸಕಲಗೌರವಗಳೊಂದಿಗೆ ಮಂಗಳವಾರ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.ತಮಿಳುನಾಡಿನ ಕಲ್ಪಕಂ ಪರಮಾಣು ವಿದ್ಯುತ್ ತಯಾರಿಕ ಕೇಂದ್ರದಲ್ಲಿ ರಕ್ಷಣೆಯ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ತಮ್ಮ ರಾತ್ರಿಪಾಳಿ ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಆಕಸ್ಮಿಕವಾಗಿ ಕೈಯಲಿರುವ ಬಂದೂಕಿನಿಂದ ಗುಂಡು ಹಾರಿ ಮೃತಪಟ್ಟಿರುವ ಕೈಗಾರಿಕಾ ಭದ್ರತಾ ಪಡೆ ಹುತಾತ್ಮ ಯೋಧ ಹಾಗೂ ಹೆಡ್ ಕಾನ್ಸಟೇಬಲ್ ವೈ.ರವಿಕಿರಣ್ (37) ಅವರ ಮೃತ ದೇಹವನ್ನು ಕೈಗಾರಿಕಾ ಭದ್ರತಾ ಪಡೆ ಸಬ್ ಇನ್ಸಪೆಕ್ಟರ್ ಅಂಕಿತ ಭಟಸಾಲ ನೇತೃತ್ವದ ಯೋಧರ ತಂಡ ಕುಟುಂಬಸ್ಥರಿಗೆ ಒಪ್ಪಿಸಿ ಗೌರವ ವಂದನೆ ಸಲ್ಲಿಸಿದರು.
ತಾಲೂಕು ಆಡಳಿತ ಹಾಗೂ ಕುಟುಂಬಸ್ಥರು ಹುತಾತ್ಮ ಯೋಧ ವೈ.ರವಿಕಿರಣ್ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ನೂರಾರು ಯುವಕರು ಬೈಕ್ ರ್ಯಾಲಿ ಮೂಲಕ ಮೃತದೇಹ ಕರೆತರಲಾಯಿತು. ತಾಲೂಕು ಆಡಳಿತದ ಪರವಾಗಿ ಶಾಸಕ ಹಂಪಯ್ಯನಾಯಕ ಹಾಗೂ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಪಿ.ಐ.ವೀರಭದ್ರಯ್ಯ ಹಿರೇಮಠ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು.ಕುಟುಂಬದವರ ಸ್ವಂತ ಜಮೀನಿನಲ್ಲಿ ಅಂತ್ಯ ಕ್ರಿಯೆ ನಡೆಯಿತು. ಸಿಐಎಸ್ಎಫ್ ಸಬ್ ಇನ್ಸೆಪೆಕ್ಟರ್ ಅಂಕಿತ ಭಟಸಾಲ ನೇತೃತ್ವದಲ್ಲಿ ಯೋಧರಾದ ಸಂತೋಷಕುಮಾರ್, ಭರತಕುಮಾರ್, ಭೂಜರಾಜ ಶರ್ಮ, ಕೆ.ಕೆ.ನಗರವಾಲ್ ಹಾಗೂ ರಾಯಚೂರಿನ ಆರ್ಟಿಪಿಎಸ್ ಸಿಐಎಸ್ಎಫ್ ಸಬ್ಇನ್ಸೆಪೆಕ್ಟರ್ ಖಾಜವಾಲಿ, ಹೆಡ್ ಕಾನ್ಸಟೇಬಲ್ ರವಿ, ಕುಪಲಿ ಈಶ್ವರರಾವ್, ಕೆ.ಡಿ.ವಾಗಮಾರೆ, ಮೌನೇಶ ಕುಮಾರ್, ದೀಪಾಕ್ ಮಹಮ್ಮದ್, ಸಿಐಎಸ್ಎಫ್ ಸಂಪ್ರದಾಯದಂತೆ ಯೋಧರು ಗೌರವ ವಂದನೆ ಸಲ್ಲಿಸಿದರು.
ಮನೆಯ ಅವರಣದಲ್ಲಿ ಅಂತಿಮ ದರ್ಶನ ಸಮಯದಲ್ಲಿ ಹುತಾತ್ಮ ಯೋಧನ ಪತ್ನಿ ಅನುಷ, ಇಬ್ಬರು ಪುತ್ರಿಯರಾದ ಯಶಸ್ವಿನಿ, ರಿತಿಕಾ, ತಂದೆ ವೈ.ಅಬ್ಬುಲು, ತಾಯಿ ವೈ.ವರಲಕ್ಷ್ಮೀ, ಸಹೋದರ ಮುರಳಿರವರು ರೋಧಿಸುತ್ತಿರುವ ದೃಶ್ಯ ಮನಕಲಕುವಂತೆ ಇತ್ತು.ಹುತಾತ್ಮ ಯೋಧನ ಮಾವ ಕಾಮೇಶ್ವರರಾವ್ ಮಾತನಾಡಿ, ಮದುವೆಯಾಗಿ ಹತ್ತು ವರ್ಷವಾಗಿದರಿಂದ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ಮಗಳು ಹಾಗೂ ಮೊಮ್ಮಕ್ಕಳು ಪಟ್ಟಣಕ್ಕೆ ಬಂದಿದ್ದರು. ರಜೆಗಾಗಿ ಅಳಿಯ ಪ್ರಯತ್ನಿಸುತ್ತಿದ್ದ ಬಟ್ಟೆ, ಒಡವೆ ಸೇರಿ ಎಲ್ಲಾ ಸಿದ್ಧತೆ ಮಾಡಿಕೊಂಡು ಅಳಿಯನಿಗಾಗಿ ಕಾಯುತ್ತಿದ್ದೆವು ಆದರೆ ಅಳಿಯ ಇಂದು ಮನೆಗೆ ಶವವಾಗಿ ಬಂದಿರುವುದು ಕುಟುಂಬದವರಿಗೆ ಅತ್ಯಂತ ದುಃಖವನ್ನುಂಟು ಮಾಡಿದೆ ಎಂದು ಸಂಬಂದಿಕರಲ್ಲಿ ಹೇಳಿಕೊಂಡು ರೋಧಿಸುತ್ತಿರುವುದು ಎಂತಹವರನ್ನಾದರು ಕರಗುವಂತ್ತಿತ್ತು.