ಗಾಳಿ ಮಳೆಗೆ ಮೂಲ್ಕಿ ತಾಲೂಕಿನ ಹಲವೆಡೆ ಹಾನಿ

| Published : Jul 24 2024, 12:32 AM IST

ಸಾರಾಂಶ

ಬಪ್ಪನಾಡು ಗ್ರಾಮದ ಒಡೆಯರಬೆಟ್ಟು ಎಂಬಲ್ಲಿ ವೀಣಾ ಚಂದ್ರಹಾಸ್ ಎಂಬವರ ಮನೆಯ ಹಿಂಬದಿಯ ಕೆಳಗಿನ ಭಾಗದ ತಡೆಗೋಡೆ ಕುಸಿದು ಮನೆ ಅಪಾಯದಲ್ಲಿದೆ. ಮನೆಯಲ್ಲಿದ್ದ ನಾಲ್ವರನ್ನು ಸ್ಥಳಾಂತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆ ಬಿರುಸಿನ ಮಳೆಯಾಗಿದ್ದು ಬಿರುಸಿನ ಮಳೆಯಿಂದ ಕೆಲವಡೆ ಹಾನಿ ಸಂಭವಿಸಿದೆ.

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಒಡೆಯರಬೆಟ್ಟು ಎಂಬಲ್ಲಿ ಬಿರುಸಿನ ಮಳೆಗೆ ವೀಣಾ ಎಂಬವರ ಮನೆಯ ಆವರಣ ಗೋಡೆ ಸಂಪೂರ್ಣ ಕುಸಿದು ಹಾನಿಯಾಗಿದೆ. ಆವರಣ ಗೋಡೆ ಕುಸಿದಿರುವ ಪರಿಣಾಮ ಮನೆಯ ಪಂಚಾಗದಲ್ಲಿ ಬಿರುಕು ಬಿಟ್ಟಿದ್ದು ಮನೆಯೂ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿ, ಭಾಗ್ಯವಂತಿ ದೇವಸ್ಥಾನದ ಹಿಂದುಗಡೆಯ ನಿವಾಸಿ ಕಮಲಾಬಾಯಿ ಎಂಬವರ ಮನೆಯ ಗೋಡೆ ಕುಸಿದು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಮನೆಯೊಳಗಿದ್ದ 12 ಜನ ಹೊರಗೆ ಓಡಿ ಬಂದು ಪಾರಾಗಿದ್ದಾರೆ. ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಶೀಲ್ದಾರ್‌ ದಿಲೀಪ್‌ ರೋಡ್ಕರ್‌,ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿರುಸಿನ ಮಳೆಗೆ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಪಂಚಮಹಲ್, ಕಿಲ್ಪಾಡಿ ಎಸ್ಸಿ ಎಸ್ಟಿ ಕಾಲೋನಿ, ಶಿಮಂತೂರು ಗುಡ್ಡೆ ಬಳಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ವಿದ್ಯುತ್ ವ್ಯತ್ಯಯವಾಗಿದೆ.ಬಪ್ಪನಾಡು ಗ್ರಾಮದ ಒಡೆಯರಬೆಟ್ಟು ಎಂಬಲ್ಲಿ ವೀಣಾ ಚಂದ್ರಹಾಸ್ ಎಂಬವರ ಮನೆಯ ಹಿಂಬದಿಯ ಕೆಳಗಿನ ಭಾಗದ ತಡೆಗೋಡೆ ಕುಸಿದು ಮನೆ ಅಪಾಯದಲ್ಲಿದೆ. ಮನೆಯಲ್ಲಿದ್ದ ನಾಲ್ವರನ್ನು ಸ್ಥಳಾಂತರಿಸಲಾಗಿದೆ.

ಭಾರಿ ಮಳೆ ಬಂದರೆ ಯಾವ ಕ್ಷಣದಲ್ಲಾದರೂ ಮನೆ ಕುಸಿಯವ ಸಾಧ್ಯತೆಯಿದೆ. ಸ್ಥಳಕ್ಕೆ ಮೂಲ್ಕಿ ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ನಗರ ಪಂಚಾಯಿತಿ ಸದಸ್ಯ ಹರ್ಷರಾಜ ಶೆಟ್ಟಿ, ಸತೀಶ್ ಅಂಚನ್, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್ ಅಶ್ವಿನಿ ಭೇಟಿ ನೀಡಿ ಪರಿಶೀಲಿಸಿದ್ದು ಮಣ್ಣು ಕುಸಿಯದಂತೆ ಮರಳಿನ ಚೀಲಗಳನ್ನು ಜೋಡಿಸಲು ವ್ಯವಸ್ಥೆ ಮಾಡಲಾಗಿದೆ.