ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಆಯುಷ್‌ನಿಂದ ಅನೇಕ ಯೋಜನೆ: ಡಾ. ಎಸ್.ಗೀತಾ

| Published : Dec 13 2024, 12:50 AM IST

ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಆಯುಷ್‌ನಿಂದ ಅನೇಕ ಯೋಜನೆ: ಡಾ. ಎಸ್.ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಆಯುಷ್ ಔಷಧಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ತಿಳುವಳಿಕೆ ನೀಡಲಾಗುತ್ತಿದೆ ಎಂದು ಆಯುಷ್ ಇಲಾಖೆ ಜಿಲ್ಲಾಧಿಕಾರಿ ಡಾ. ಎಸ್.ಗೀತಾ ತಿಳಿಸಿದರು.

- ಜಿಲ್ಲಾ ಆಯುಷ್ , ಸಮಾಜ ಕಲ್ಯಾಣ ಇಲಾಖೆಯಿಂದ ಕಾಮನಕೆರೆ ಮೊರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಆಯುಷ್ ಔಷಧಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ತಿಳುವಳಿಕೆ ನೀಡಲಾಗುತ್ತಿದೆ ಎಂದು ಆಯುಷ್ ಇಲಾಖೆ ಜಿಲ್ಲಾಧಿಕಾರಿ ಡಾ. ಎಸ್.ಗೀತಾ ತಿಳಿಸಿದರು.

ಗುರುವಾರ ಜಿಲ್ಲಾ ಆಯುಷ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕಿನ ಕಾಮನಕೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮ 2024-25ರ ಯೋಜನೆಯಡಿ ಆಯೋಜಿಸಿದ್ದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯುಷ್ ಇಲಾಖೆ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಸುಧಾರಣೆಗೆ ಅನೇಕ ಯೋಜನೆಗಳನ್ನು ಇಲಾಖೆ ಕೈಗೊಂಡಿದೆ. ಮಕ್ಕಳಿಗೆ ಮನೆಯಲ್ಲಿರುವ ಅನೇಕ ಪದಾರ್ಥಗಳಾದ ಶುಂಠಿ, ಮೆಣಸು, ತುಳಸಿ, ದೊಡ್ಡಪತ್ರೆ, ಅರಿಶಿನ, ತುಂಬೆ, ನೆಲನೆಲ್ಲಿಗಳ ಉಪಯೋಗಗಳ ಬಗ್ಗೆ ವಿವರಿಸಿ ಇವುಗಳ ಸೇವನೆ ಮತ್ತು ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಆಯುಷ್ ಅಧಿಕಾರಿ ಡಾ. ಮಲ್ಲೇಶ್ ದೊಡ್ಡಗುಣಿ ಮಾತನಾಡಿ, ಮನುಷ್ಯನ ಆರೋಗ್ಯದ ರಾಮಬಾಣವಾಗಿರುವ ಆಯುರ್ವೇದ, ಯೋಗ ಮತ್ತು ಹೋಮಿಯೋಪತಿ, ಯುನಾನಿ ವೈದ್ಯಕೀಯ ಪದ್ದತಿಗಳು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಉತ್ತಮ ಮಾನಸಿಕ ಆರೋಗ್ಯ ಪಡೆಯಲು ಆಯುಷ್ ಔಷಧಿಗಳ ಸೇವನೆ ಹಾಗೂ ವ್ಯಾಯಾಮ ಮತ್ತು ಯೋಗ ಕಲಿಯಬೇಕು ಎಂದು ಮಕ್ಕಳಿಗೆ ತಿಳಿಸಿದರು.

ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಖರ್ಜೂರ ಪಾನಕ ನೀಡಿ, ಆರೋಗ್ಯ, ಆಹಾರ,ಆಯುರ್ವೇದ, ಯೋಗದಿಂದ ಆಗುವ ಪರಿಣಾಮಗಳನ್ನು ವಿವರಿಸಿದರು. ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರಾದ ದಿವ್ಯಶ್ರೀ ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಆಯುಷ್ ಇಲಾಖೆ ವೈದ್ಯರು ಮತ್ತು ಅನೇಕ ಗಿಡಮೂಲಿಕೆ ಔಷಧಿಗಳನ್ನು ನೀಡಿ ಆರೋಗ್ಯ ತಪಾಸಣೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ವೈದ್ಯರ ಸಲಹೆಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕು ಎಂದು ತಿಳಿಸಿದರು. ಕಡೂರಿನ ಯೋಗ ಶಿಕ್ಷಕ ಬಿ.ಎಂ.ಗಿರೀಶ್ ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಪ್ರತಿ ಯೊಬ್ಬರು ಯೋಗ ಕಲಿಯಬೇಕು ಯೋಗದಿಂದ ಆರೋಗ್ಯ ಭಾಗ್ಯ ಪಡೆಯಲು ಸಾಧ್ಯ. ಜೊತೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಯೋಗಕ್ಕೆ ಉತ್ತಮ ಸ್ಥಾನ ಇರುವ ಕುರಿತು ಮಕ್ಕಳಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸನಾಯ್ಕ, ಡಾ.ಮಂಜುನಾಥ್, ರತ್ನಶೇಖರ್, ಡಾ.ಮಧು ವಸತಿ ಶಾಲೆ ಶಿಕ್ಷಕರಾದ ವಸಂತ್‍ ಕುಮಾರ್, ಜ್ಯೋತಿ, ಗೋಪಿನಾಥ್ ಹಾಗೂ ಮಕ್ಕಳು ಇದ್ದರು.

12ಕೆಕೆಡಿಯು2.

ಕಡೂರು ತಾಲೂಕು ಕಾಮನಕೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ,ಜಿಪಂ ಆಡಳಿತ,ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಚೇತನ ಆಯುಷ್ ಸೇವಾ ಕಾರ್ಯಕ್ರಮವನ್ನು ಆಯುಷ್ ಇಲಾಖೆಯ ಜಿಲ್ಲಾಧಿಕಾರಿ ಡಾ.ಗೀತಾ ಉದ್ಘಾಟಿಸಿದರು.