ದೇಶದ ಸುಭಿಕ್ಷೆಗಾಗಿ 300 ಋತ್ವಿಜರಿಂದ ಮನ್ಯುಸೂಕ್ತ ಹೋಮ

| Published : Oct 20 2025, 01:04 AM IST

ಸಾರಾಂಶ

ಸುಮಾರು 300 ಕ್ಕೂ ಅಧಿಕ ಋತ್ವಿಜರು, ವೈದಿಕರು ತಮ್ಮ‌ ಸ್ವಯಂ ಮುತುವರ್ಜಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪೇಜಾವರ, ಶ್ರೀ ಅದಮಾರು, ಶ್ರೀ ಕಾಣಿಯೂರು ಮಠಾಧೀಶರುಗಳ ಅನುಗ್ರಹಪೂರ್ವಕ ಸಹಕಾರದೊಂದಿಗೆ 25 ಯಜ್ಞ ಕುಂಡಗಳಲ್ಲಿ ಈ ಯಾಗ ಹಾಗೂ ಮಹಾಗಣಪತಿ ಹೋಮವೂ ನಡೆಯಿತು.‌

ಕನ್ನಡಪ್ರಭ ವಾರ್ತೆ ಉಡುಪಿ

ಸಮಗ್ರ ಭಾರತ ದೇಶದ ಸುಭಿಕ್ಷೆ ಕ್ಷೇಮ‌ ಸಮೃದ್ಧಿ, ಶಾಂತಿ ನೆಮ್ಮದಿ ಹಾಗೂ ದೇಶ ಮತ್ತು ಸನಾತನ ಧರ್ಮಕ್ಕೆ ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಎದುರಾಗುತ್ತಿರುವ ಹಾನಿಗಳಿಂದ ರಕ್ಷಣೆ, ಧರ್ಮನಿಷ್ಠ ಸಜ್ಜನರ ರಕ್ಷಣೆಯೇ ಮೊದಲಾದ ಲೋಕಹಿತದ ಪ್ರಾರ್ಥನೆಯೊಂದಿಗೆ ಶ್ರೀ ನರಸಿಂಹ ದೇವರ ಅನುಗ್ರಹ ಸಿದ್ಧಿಗಾಗಿ ಇಲ್ಲಿನ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮನ್ಯುಸೂಕ್ತ ಪುನಶ್ಚರಣ ಹೋಮವನ್ನು ನಡೆಸಿದರು.‌

ಸುಮಾರು 300 ಕ್ಕೂ ಅಧಿಕ ಋತ್ವಿಜರು, ವೈದಿಕರು ತಮ್ಮ‌ ಸ್ವಯಂ ಮುತುವರ್ಜಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪೇಜಾವರ, ಶ್ರೀ ಅದಮಾರು, ಶ್ರೀ ಕಾಣಿಯೂರು ಮಠಾಧೀಶರುಗಳ ಅನುಗ್ರಹಪೂರ್ವಕ ಸಹಕಾರದೊಂದಿಗೆ 25 ಯಜ್ಞ ಕುಂಡಗಳಲ್ಲಿ ಈ ಯಾಗ ಹಾಗೂ ಮಹಾಗಣಪತಿ ಹೋಮವೂ ನಡೆಯಿತು.‌

ಶ್ರೀ ಪೇಜಾವರ ಮಠದ ಪಟ್ಟದ ಶ್ರೀ ಕೋದಂಡರಾಮ, ಪಾಂಡುರಂಗ ವಿಠಲ ದೇವರ ಪೂಜೆಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರೂ ಪಾಲ್ಗೊಂಡರು.‌ ಯತಿತ್ರಯರಿಗೆ ಗುರುಪೂಜೆ ನೆರವೇರಿಸಲಾಯಿತು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಬೆಳಿಗ್ಗೆ ಸರ್ವಜ್ಞ ಪೀಠದಲ್ಲಿ ಶ್ರೀ ಕೃಷ್ಣನ ಗರ್ಭಗುಡಿಯಿಂದ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿ ದೀಪವನ್ನು ವೈದಿಕರಿಗೆ ಹಸ್ತಾಂತರಿಸಿದರು.‌ ಅದೇ ದೀಪವನ್ನು ಸಗ್ರಿಯ ಯಜ್ಞ ಶಾಲೆಗೆ ತಂದು ಯಜ್ಞಾಗ್ನಿಯನ್ನು ಜ್ವಲಿಸಲಾಯಿತು. ನಾಗಪಾತ್ರಿ ಗೋಪಾಲಕೃಷ್ಣ ಸಾಮಗ ದಂಪತಿ ಸಂಕಲ್ಪ ನೆರವೇರಿಸಿದರು. ಶಿಬರೂರು ವೇದವ್ಯಾಸ ತಂತ್ರಿ, ಪಾಡಿಗಾರು ಶ್ರೀನಿವಾಸ ತಂತ್ರಿ, ಕುಮಾರಗುರು ತಂತ್ರಿ, ಮಟ್ಟು ಪ್ರವೀಣ ತಂತ್ರಿ, ಹೆರ್ಗ ಜಯರಾಮ‌ ತಂತ್ರಿ. ರವೀಂದ್ರ ಭಟ್, ಮೊದಲಾಗಿ 25 ಮಂದಿ ವೇದಾ‌ಗಮ ವಿದ್ವಾಂಸರು ಪ್ರಧಾನ ಋತ್ವಿಜರಾಗಿ ಭಾಗವಹಿಸಿದರು.‌

ಸುಬ್ರಹ್ಮಣ್ಯ ಸಾಮಗ , ಜ್ಯೋತಿಷ ವಿದ್ವಾನ್ ಗೋಪಾಲ‌ ಜೋಯಿಸ್, ಶಿವಪುರ ವಾಸುದೇವ ಭಟ್, ಪಾದೆಬೆಟ್ಟು ರಾಜೇಶ ಭಟ್, ಜಿ. ಬಾಲಕೃಷ್ಣ ಭಟ್, ಅನಂತ ಸಾಮಗ, ವಾಸುದೇವ ಭಟ್, ವರದರಾಜ ಭಟ್ ಮೊದಲಾದವರು ಸಹಕರಿಸಿದರು .