ಕನ್ನಡಪ್ರಭ ವಾರ್ತೆ ತುಮಕೂರು ಅಕ್ಷಯ ತಾಂತ್ರಿಕ ವಿದ್ಯಾಲಯದ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಿಂದ ನಶೆ ಮುಕ್ತ ಸಮಾಜ ಎಂಬ ಘೋಷವಾಕ್ಯದ ಅಡಿಯಲ್ಲಿ ಎರಡು ಕಿ.ಮಿ. ಮ್ಯಾರಥಾನ್ ಓಟವನ್ನು ನಗರದಲ್ಲಿ ಆಯೋಜಿಸಲಾಗಿತ್ತು. ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಯತೀಶ್.ಎಲ್ ಅವರ ನೇತೃತ್ವದಲ್ಲಿ ನಡೆದ ಮ್ಯಾರಥಾನ್‌ಗೆ ಟ್ರಾಫಿಕ್ ಎ.ಎಸ್.ಐಗಳಾದ ಶಂಕರಪ್ಪ, ರಂಗನಾಥ್ ಹಾಗೂ ಪ್ರಾಂಶುಪಾಲ ಡಾ.ಯತೀಶ್ ಎಲ್. ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅಕ್ಷಯ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ.ಯತೀಶ್.ಎಲ್,ನಮ್ಮ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಮಕ್ಕಳಿಗೆ ಒಂದೊಂದು ಉದ್ದೇಶ ಇಟ್ಟುಕೊಂಡು ಈ ರೀತಿಯ ಮ್ಯಾರಥಾನ್ ಆಯೋಜಿಸುತಿದ್ದು, ಈ ಬಾರಿ ಮಾದಕ ವಸ್ತು ಮುಕ್ತ ಸಮಾಜ ಎಂಬ ಹೆಸರಿನಲ್ಲಿ ಈ ಓಟವನ್ನು ಆಯೋಜಿಸಿದ್ದೇವೆ. ನಮ್ಮ ಕಾಲೇಜಿನ ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದಾರೆ.ಸೆಮಿಸ್ಟರ್ ಪದ್ಧತಿಯ ಓದಿನಿಂದ ಸದಾ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಇಂತಹ ಆಟೋಟಗಳನ್ನು ಕಾಲೇಜಿನಲ್ಲಿ ಆಗಿಂದಾಗ್ಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಮಾದಕ ವಸ್ತು ಮುಕ್ತ ಸಮಾಜ ಇದು ಒಂದು ಜಾಗೃತಿಯ ಕಾರ್ಯಕ್ರಮ. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ಉತ್ತಮ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಆ ಮೂಲಕ ಸಶಕ್ತ ಸಮಾಜ ಮತ್ತು ದೇಶವನ್ನು ಕಟ್ಟಲು ಸಹಕಾರಿಯಾಗಬೇಕು ಎಂಬ ನಿಟ್ಟಿನಲ್ಲಿ ಅಕ್ಷಯ ತಾಂತ್ರಿಕ ವಿದ್ಯಾಲಯದ ಈ ಓಟವನ್ನು ಯುವಜನರಿಗೆ ಆರ್ಪಿಸಲಿದೆ ಎಂದು ಡಾ.ಯತೀಶ್.ಎಲ್. ತಿಳಿಸಿದರು. ಅಕ್ಷಯ ತಾಂತ್ರಿಕ ವಿದ್ಯಾಲಯದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಪ್ರವೀಣ.ಡಿ.ಎಸ್. ಮಾತನಾಡಿ, ಆರು ದಿನಗಳ ಕಾಲ ನಡೆಯುವ ಎಐಟಿಯ ವಾರ್ಷಿಕೋತ್ಸವದಲ್ಲಿ (ಕಾಲೇಜ್ ಫೀಸ್ಟ್) ಮೊದಲ ದಿನ ಲೋಗೋ ಲಾಂಛನ, ಎರಡನೇ ದಿನ ಮ್ಯಾರಥಾನ್, ತದ ನಂತರದ ಮೂರು ದಿನ ಕ್ರೀಡಾ ಚಟುವಟಿಕೆಗಳು ಜರಗಲಿವೆ. ವಿವಿಧ ವೇಷಭೂಷಣಗಳ ಸ್ಪರ್ಧೆಯ ಜೊತೆಗೆ, ವಿಟೆಂಜ್ ಕಾರುಗಳ ಪ್ರದರ್ಶನ, ಡಾ.ಶ್ರಾವ್ಯ ರಾವ್ ನೇತೃತ್ವದ ಮ್ಯೂಜಿಕಲ್ ನೈಟ್ಸ್ ಹಾಗೂ ಏ.17 ರಂದು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಇದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಭೋದಕೇತರ ಸಿಬ್ಬಂದಿ ಸಹ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಚಾರ ಎಂದರು.

ಮ್ಯಾರಥಾನ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಪ್ರೋ.ಕಬ್ಬಡಿ ರೆಫರಿ ನಳಿನಾಕ್ಷಿ, ಕಾಲೇಜಿನ ಮಕ್ಕಳಲ್ಲಿರುವ ಉತ್ಸಾಹ ನೋಡಿ ಬಹಳ ಖುಷಿಯಾಯಿತು. ಕ್ರೀಡೆ ಕೇವಲ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲಷ್ಟೇ ಮುಖ್ಯವಲ್ಲ.ಆದು ಸಾಧನೆಯ ಮೆಟ್ಟಿಲು. ನಿಮ್ಮನ್ನು ನೀವು ಸಮಾಜದ ಮುಂದೆ ಸಾಬೀತು ಪಡಿಸಲು ಕ್ರೀಡೆ ಒಂದು ಒಳ್ಳೆಯ ವೇದಿಕೆ.ಉದ್ಯೋಗದ ಜೊತೆಗೆ,ಒಳ್ಳೆಯ ಆರೋಗ್ಯವನ್ನು ನೀಡುತ್ತದೆ.ಯುವಜನರು ಕ್ರೀಡೆಯಿಂದ ಏನಾಗುತ್ತದೆ ಎಂಬ ಉಢಾಪೆ ಮನೋಭಾವನೆ ತೊರೆದು ಕ್ರೀಡೆಗಳಲ್ಲಿ ಪಾಲ್ಗೊಂಡಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂದರು. ವೇದಿಕೆಯಲ್ಲಿ ಅಕ್ಷಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಯತೀಶ್.ಎಲ್,ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪ್ರವೀಣ್, ಎನ್.ಎಸ್.ಎಸ್.ಅಧಿಕಾರಿ ರಾಕೇಶ್,ಪಿಆರ್‌ಓ ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.