ಸಾರಾಂಶ
ಹರಿಹರ: ತಾಲೂಕಿನ ಕಡ್ಲೆಗೊಂದಿ ಗ್ರಾಮದ ಸೂರು ವಂಚಿತರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಸೆ.2ರಂದು ಬೆಳಗ್ಗೆ ೧೦ ಗಂಟೆಗೆ ಹೊರವಲಯದಲ್ಲಿರುವ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಗ್ರಾಮದಲ್ಲಿ ಭಾನುವಾರ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ತಿಳಿಸಿದ್ದಾರೆ.
ಬೇಡಿಕೆಗಳ ಈಡೇರಿಕೆಗಾಗಿ ಈ ಹಿಂದೆ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳದಿಂದ ತಾಲೂಕು ಕಚೇರಿವರೆಗೆ ತಮಟೆ ಚಳವಳಿ, ತಾಲೂಕು ಕಚೇರಿ ಎದುರು ಸತತವಾಗಿ ೬೦ ದಿನಗಳ ಕಾಲ ಧರಣಿ ಹಾಗೂ ಬೆಂಗಳೂರಿನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ, ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಮನವಿ ನೀಡಲಾಗಿತ್ತು. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯಗಳು ವ್ಯಕ್ತವಾದವು.ಗ್ರಾಮದಲ್ಲಿ ಸರ್ವೆ ನಂ.೩೭/೨ರಲ್ಲಿ ಲಭ್ಯವಿರುವ ಸರ್ಕಾರದ ಜಮೀನಿನಲ್ಲಿ ವಸತಿ ಯೋಜನೆ ಜಾರಿಗೆ ಸಂಘಟನೆ ಹೋರಾಡಿದ ಫಲವಾಗಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ೭೩ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ವತಿಯಿಂದ ೯ ತಿಂಗಳ ಹಿಂದೆಯೇ ಸಿದ್ಧಪಡಿಸಲಾಗಿದೆ. ಪಟ್ಟಿ ಸಿದ್ಧಪಡಿಸಿದ ನಂತರವೂ ನಿವೇಶನಗಳ ಹಂಚಿಕೆ ಏಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ತಾಲೂಕುಮಟ್ಟದಲ್ಲಿ ಭೂ ನ್ಯಾಯ ಮಂಡಳಿ ರಚನೆ ಆಗಬೇಕಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು. ಇತ್ತೀಚಿಗೆ ಭೂ ನ್ಯಾಯ ಮಂಡಳಿಯೂ ರಚನೆಯಾಗಿದೆ. ಈಗಲೂ ಕಾರಣಗಳ ಹೇಳದೇ ಆದಷ್ಟು ಬೇಗ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಸಲು ಆಗ್ರಹಿಸಲು ಹೋರಾಟ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಕಡ್ಲೆಗೊಂದಿ ಗ್ರಾಪಂ ಉಪಾಧ್ಯಕ್ಷೆ ಮಾತೆಂಗೆಮ್ಮ ತಿಮ್ಮಣ್ಣ ಮಾತನಾಡಿ, ತಾಲೂಕು ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ಎಲ್ಲ ಫಲಾನುಭವಿಗಳು ಕುಟುಂಬ ಸಮೇತ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದರು.ವಿಜಯ್ ಕೆ. ಬೇವಿನಹಳ್ಳಿ, ಹನುಮಂತಪ್ಪ ಕೆ.ಎಚ್., ರಂಗಪ್ಪ, ಶೀಲಾ ರಾಜಪ್ಪ, ಶಿವಣ್ಣ, ಹನುಮಂತ, ಸಣ್ಣ ನಿಂಗಪ್ಪ, ಶೈಲೂ ಅಣ್ಣಪ್ಪ, ಮೈಲಮ್ಮ, ದುರ್ಗಜ್ಜ, ಲೋಕೇಶ್, ರುಕ್ಮಿಣಿ, ನಾಗಮ್ಮ, ನಿಂಗರಾಜ್, ಕೊಟ್ರಪ್ಪ, ದುರ್ಗಮ್ಮ, ಮೊಹಮ್ಮದ್ ಅಲಿ, ರತ್ನಕ್ಕ, ಬಸವರಾಜ್, ಮೈಲಮ್ಮ, ಪ್ರಭು., ಸಂಜೀವ್ ಭಾಗವಹಿಸಿದ್ದರು.
- - --31HRR.02:
ಕಡ್ಲೆಗೊಂದಿಯಲ್ಲಿ ಭಾನುವಾರ ವಸತಿರಹಿತರ ಸಭೆ ನಡೆಯಿತು.