ನೆಲ್ಯಹುದಿಕೇರಿ ಕುಂಬಾರಗುಂಡಿಗೆಯಲ್ಲಿ ಪೊಲೀಸರು 612 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿದ್ದಾಪುರ: ನೆಲ್ಯಹುದಿಕೇರಿ ಕುಂಬಾರಗುಂಡಿಗೆಯಲ್ಲಿ ಪೊಲೀಸರು 612 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಡಿಎಸ್ಪಿ ಸೂರಜ್ ಹಾಗೂ ವೃತ್ತ ನಿರೀಕ್ಷಕ ಚಂದ್ರಶೇಖರ್ ನೇತೃತ್ವದಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಯಹುದಿಕೇರಿ ಕಾವೇರಿ ನದಿ ಸಮೀಪದ ಕುಂಬಾರಗುಂಡಿಗೆ ತೆರಳುವ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು.ಕಾರ್ಯಾಚರಣೆಯಲ್ಲಿ ಗುಹ್ಯ ಗೂಡುಗದ್ದೆಯ ಧನುಷ್ (23), ಸಿದ್ದಾಪುರ ಕರಡಿಗೋಡು ಗೌತಮ್ (19) ಹಾಗೂ ನೆಲ್ಯಹುದಿಕೇರಿಯ ಅನ್ಸಾದ್ (23) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 612 ಗ್ರಾಂ ಒಣಗಿದ ಗಾಂಜಾ, 300 ರೂ. ನಗದು, 14 ಮತ್ತು 13 ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು, 3 ಸ್ಮಾರ್ಟ್ ವಾಚ್‌ಗಳು, ಒಂದು ಬ್ಯಾಗ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಹಾಗೂ ಪ್ರವೀಣ್, ಸಿದ್ದಾಪುರ ಠಾಣೆಯ ಎಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ರಾಜೇಶ್ ಮತ್ತು ಮಣಿಕಂಠ ಭಾಗವಹಿಸಿದ್ದರು.