ಖಾಂಡ್ಯದಲ್ಲಿ ಮಾರ್ಕಾಂಡೇಶ್ವರ ರಥೋತ್ಸವ ಸಂಭ್ರಮ

| Published : Mar 19 2024, 12:45 AM IST

ಸಾರಾಂಶ

ಪುರಾಣ ಪ್ರಸಿದ್ಧ ಕ್ಷೇತ್ರ, ದಕ್ಷಿಣ ಕಾಶಿ ಖಾಂಡ್ಯದಲ್ಲಿ ತ್ರಯಂಬಕ ಮೃತ್ಯುಂಜಯ ಮಾರ್ಕಾಂಡೇಶ್ವರ ಸ್ವಾಮಿ ಶ್ರೀಮನ್ ಮಹಾರಥೋತ್ಸವ ವಿಜೃಂಭಣೆಯಿಂದ ಸೋಮವಾರ ನಡೆಯಿತು.

ಗಂಗೆಗಿರಿ ಪಂಚಮುಖಿ ಕ್ಷೇತ್ರದಲ್ಲಿ ಪೂಜೆ, ಧ್ವಜಾರೋಹಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪುರಾಣ ಪ್ರಸಿದ್ಧ ಕ್ಷೇತ್ರ, ದಕ್ಷಿಣ ಕಾಶಿ ಖಾಂಡ್ಯದಲ್ಲಿ ತ್ರಯಂಬಕ ಮೃತ್ಯುಂಜಯ ಮಾರ್ಕಾಂಡೇಶ್ವರ ಸ್ವಾಮಿ ಶ್ರೀಮನ್ ಮಹಾರಥೋತ್ಸವ ವಿಜೃಂಭಣೆಯಿಂದ ಸೋಮವಾರ ನಡೆಯಿತು.

ಮಹಾರಥೋತ್ಸವದ ಅಂಗವಾಗಿ ಕಳೆದ ಎರಡು ದಿನಗಳಿಂದ ಶ್ರೀಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದ್ದು, ಗುರು-ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಪತಿ ಹೋಮಗಳು, ಗಂಗೆಗಿರಿ ಪಂಚಮುಖಿ ಕ್ಷೇತ್ರದಲ್ಲಿ ಪೂಜೆ, ಧ್ವಜಾರೋಹಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯ ನಡೆಯಿತು.

ಸೋಮವಾರ ಮಧ್ಯಾಹ್ನ ಆರಿದ್ರಾ ನಕ್ಷತ್ರದಲ್ಲಿ ಮಾರ್ಕಾಂಡೇಶ್ವರ ಸ್ವಾಮಿ ಮಹಾರಥೋತ್ಸವ ವಿವಿಧ ಧಾರ್ಮಿಕ ಕಾರ್ಯ ಗಳೊಂದಿಗೆ ವಿಧಿವತ್ತಾಗಿ ವಿಜೃಂಭಣೆಯಿಂದ ನಡೆದಿದ್ದು, ಇದಕ್ಕೂ ಮುನ್ನ ಶೃಂಗೇರಿ ಶಾರದಾ ಪೀಠದಿಂದ ವಿಶೇಷ ಪೂಜೆ ನೆರವೇರಿಸಲಾಯಿತು.

ರಥೋತ್ಸವದಲ್ಲಿ ಸಂಗಮೇಶ್ವರ ಪೇಟೆ, ಬೊಗಸೆ, ಬಾಸಾಪುರ, ಕಡಬಗೆರೆ, ದೇವದಾನ, ಕಡವಂತಿ, ಬಾಳೆಹೊನ್ನೂರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು. ರಥೋತ್ಸವಕ್ಕೂ ಮುನ್ನ ಶ್ರೀಸ್ವಾಮಿ ವಿಗ್ರಹವನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಲಾಯಿತು.

ರಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆಹಣ್ಣು ಸೇರಿದಂತೆ ಹಲವು ದವಸ, ಧಾನ್ಯಗಳನ್ನು, ಫಲ ಪುಷ್ಪವನ್ನು ಮಹಾರಥದೆಡೆಗೆ ಎರಚಿ ಭಕ್ತಿ ಸಮರ್ಪಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಧಾರ್ಮಿಕ ಕಾರ್ಯಕ್ರಮಗಳು ಕಮ್ಮರಡಿಯ ಲಕ್ಷ್ಮೀನಾರಾಯಣ ಸೋಮಯಾಜಿಗಳ ನೇತೃತ್ವದಲ್ಲಿ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ರಥೋತ್ಸವದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ.ಮಂಜುನಾಥ್, ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್, ಪ್ರಮುಖರಾದ ರತ್ನಾಕರ್ ಬೆಳಸೆ, ನಾಗೇಶ್ ಬೆಳಸೆ, ಬಿ.ಸಿ.ಮಂಜುನಾಥ್, ಜಯಶೀಲ್, ಎಂ.ಜೆ.ಚಂದ್ರಶೇಖರ್, ಗುರುಮೂರ್ತಿ, ಶಿವಣ್ಣ, ಎಸ್.ವಿ.ಶಂಕರ್, ಬಾಸಾಪುರ ಭೋಜೇಗೌಡ, ಮತ್ತಿತರರು ಹಾಜರಿದ್ದರು.

ಸೋಮವಾರ ರಾತ್ರಿ ಶಯನೋತ್ಸವ ನಡೆಯಿತು. ಮಂಗಳವಾರ ಪ್ರಭೋಧೋತ್ಸವ, ಯಾತ್ರಾ ಹೋಮ, ಅವಭೃತೋತ್ಸವ, ವಸಂತೋತ್ಸವ, ರಾತ್ರಿ ತೆಪ್ಪೋತ್ಸವ, ಬುಧವಾರ ಸಂಪ್ರೋಕ್ಷಣೆ ಹೋಮ, ರುದ್ರಾಭಿಷೇಕ, ರುದ್ರಹೋಮ ನಡೆಯಲಿದೆ.

೧೮ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.