2ಎ ಮೀಸಲಾತಿಗಾಗಿ ನಾಳೆ ಬೃಹತ್‌ ಸಮಾವೇಶ

| Published : Nov 21 2025, 02:00 AM IST

ಸಾರಾಂಶ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸುವ ಹೋರಾಟದ 8ನೇ ಪ್ರತಿಜ್ಞಾ ಕ್ರಾಂತಿಯ ಅಂಗವಾಗಿ ಸಮಾಜವನ್ನು ಮತ್ತಷ್ಟು ಸಂಘಟಿಸಿ ಮುಂದಿನ ನಿರ್ಣಾಯಕ ತೀರ್ಮಾನ ಕೈಗೊಳ್ಳಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.

ಕುಂದಗೋಳ:

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸುವ ಹೋರಾಟದ 8ನೇ ಪ್ರತಿಜ್ಞಾ ಕ್ರಾಂತಿಯ ಅಂಗವಾಗಿ ಸಮಾಜವನ್ನು ಮತ್ತಷ್ಟು ಸಂಘಟಿಸಿ ಮುಂದಿನ ನಿರ್ಣಾಯಕ ತೀರ್ಮಾನ ಕೈಗೊಳ್ಳಲು ನ. 22ರಂದು ಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಿಂದ ಆರಂಭವಾದ ಸಂಘಟನೆಗೆ ಶ್ರೀಮಠ ಸದಾ ಬೆಂಬಲ ನೀಡುತ್ತಿದೆ. ತಾಲೂಕು ಲಿಂಗಾಯತ ಪಂಚಮಸಾಲಿ ಮಹಾಸಭಾದ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 201ನೇ ವಿಜಯೋತ್ಸವದೊಂದಿಗೆ ಜರುಗಲಿದೆ. ರಾಜ್ಯದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಬೇಕೆಂದು ಮನವಿ ಮಾಡಿದರು.

ತಾಲೂಕು ಅಧ್ಯಕ್ಷ ನಾಗರಾಜ ದೇಶಪಾಂಡೆ ಮಾತನಾಡಿ, ನ. 22ರಂದು ಮಧ್ಯಾಹ್ನ 1ಕ್ಕೆ ಹರಭಟ್ಟ ಹೈಸ್ಕೂಲ್ ಮೈದಾನದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಶೆರೆವಾಡ ಗ್ರಾಮದ ಟೋಲ್ ನಾಕಾದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೃಹತ್ ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಸಮಾವೇಶ ನಡೆಯುವ ಮುಖ್ಯ ವೇದಿಕೆಗೆ ಕರೆತರಲಾಗುತ್ತಿದೆ. ಈ ಸಮಾವೇಶದಲ್ಲಿ ವಿವಿಧ ಮಠಾಧೀಶರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ, ಎಂ.ಆರ್. ಪಾಟೀಲ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದರು.

ಕಾರ್ಯಕ್ರಮದ ನಂತರ ವೀರರಾಣಿ ಚನ್ನಮ್ಮ ಮತ್ತು ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳೊಂದಿಗೆ ಭವ್ಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ ದೇಶಪಾಂಡೆ, ಸೋಮರಾವ ದೇಸಾಯಿ, ಸೋಮನಗೌಡ ಪಾಟೀಲ, ಬಸವರಾಜ ನಾವಳ್ಳಿ, ಶೇಖಣ್ಣ ಬಾಳಿಕಾಯಿ, ವೆಂಕನಗೌಡ ಕಂಠೆಪ್ಪಗೌಡ್ರ, ದೇವಪ್ಪ ಇಚ್ಚಂಗಿ ಸೇರಿದಂತೆ ಹಲವರು ಹಾಜರಿದ್ದರು.