ಸಾರಾಂಶ
ಜಾತ್ರೆ, ಉತ್ಸವಗಳಲ್ಲಿ ನಡೆಸುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಲಿವೆ. ಅಲ್ಲದೆ ಸಾಮರಸ್ಯಕ್ಕೆ ಕಾರಣವಾಗಲಿವೆ ಎಂದು ಅಂಕಲಿಮಠದ ಶ್ರೀಫಕೀರಯ್ಯಸ್ವಾಮಿ ಹೇಳಿದರು.
ಯಲಬುರ್ಗಾ:
ಸಾಮೂಹಿಕ ವಿವಾಹ ನಡೆಸುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಅಂಕಲಿಮಠದ ಶ್ರೀಫಕೀರಯ್ಯಸ್ವಾಮಿ ಹೇಳಿದರು.ತಾಲೂಕಿನ ಪುಟಗಮರಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಜಗಜ್ಯೋತಿ ಬಸವೇಶ್ವರರ ೪೬ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಾತ್ರೆ, ಉತ್ಸವಗಳಲ್ಲಿ ನಡೆಸುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಲಿವೆ. ಅಲ್ಲದೆ ಸಾಮರಸ್ಯಕ್ಕೆ ಕಾರಣವಾಗಲಿವೆ. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ದಂಪತಿಗಳು ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದರು.ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ದಾನ, ಧರ್ಮ ಮಾಡುವ ಮೂಲಕ ಪರೋಪಕಾರ ಗುಣ ಹೊಂದಬೇಕು. ಸಾಮಾಜಿಕ ಕಳಕಳಿಯೊಂದಿಗೆ ಸಮಿತಿಯವರು ನಡೆಸುವ ಸಾಮೂಹಿಕ ವಿವಾಹ ಮಹೋತ್ಸವಗಳು ನಿಜಕ್ಕೂ ಶ್ಲಾಘನೀಯ ಎಂದರು.
ಸೋಮನಾಳದ ಪುರಾಣ ಪ್ರವಚನಕಾರ ಮಲ್ಲಕಾರ್ಜುನಯ್ಯಶಾಸ್ತ್ರಿ ಹಿರೇಮಠ, ಗಾಯಕರಾದ ವಿರೂಪಾಕ್ಷಯ್ಯಶಾಸ್ತ್ರಿ ಹಿರೇಮಠ, ಶಿವಪ್ಪಚೌರಿ ಅವರಿಂದ ಪ್ರವಚನ ನಡೆಯಿತು.ಪುರಾಣ ಮಂಗಲೋತ್ಸವ ಅಂಗವಾಗಿ ಸೋಮನಾಳದ ಮಲ್ಲಯ್ಯ ತಾತನವರು, ವಿಜಯಕುಮಾರಸ್ವಾಮಿ, ಕಂಠಿಬಸಯ್ಯ ಹಿರೇಮಠ ಅವರಿಂದ ಬಸವಲಿಂಗೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಕುಂಭಾಭಿಷೇಕ ನಡೆಯಿತು. ಸಂಜೆ ಭಜನೆ, ಡೊಳ್ಳು ಹಾಗೂ ಕಳಸ ಮತ್ತು ಪುರವಂತರ ಒಡಪುಗಳೊಂದಿಗೆ ಲಘು ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ಈ ವೇಳೆ ಪ್ರಮುಖರಾದ ಬೊಮ್ಮನಾಳಪ್ಪ ಪಾಟೀಲ್, ಬಸಟ್ಟೆಪ್ಪ ವಟಪರ್ವಿ, ಬಸವರಾಜ ತಳವಾರ್, ಬಾಳನಗೌಡ ದಳಪತಿ, ಕಲ್ಯಾಣಪ್ಪ ಕಲ್ಲೊಡ್ಡಿ, ಅಯ್ಯಪ್ಪ ಕಲ್ಲೊಡ್ಡಿ, ಕನಕಪ್ಪ, ಪಂಚಾಕ್ಷರಿ ಹಿರೇಮಠ, ಕಲ್ಯಾಣಕುಮಾರ ಅಂಗಡಿ, ಹನುಮಂತಪ್ಪ ಕುಂಬಳಕಾಯಿ ಸೇರಿದಂತೆ ಮತ್ತಿತರರು ಇದ್ದರು.