ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಸೋಮವಾರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಪಟ್ಟಣದ ಹಡಗಲಿ ರಸ್ತೆಯ ಹೊರವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಬಳಿ ಇರುವ ಈದ್ಗಾ ಮೈದಾನದಲ್ಲಿ ಕೆಲವು ಪಂಗಡದ ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ, ಅಲ್ಲಿಯೇ ಪಕ್ಕದಲ್ಲಿ ಹಾಕಿದ ಪ್ರತ್ಯೇಕ ಪೆಂಡಾಲ್ನಲ್ಲಿ ಮುಸ್ಲಿಂ ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಎಚ್ ಪಿ ಎಸ್ ಕಾಲೇಜು ಹಿಂಭಾಗದಲ್ಲಿ ಇರುವ ಈದ್ಗಾದಲ್ಲಿ ಇನ್ನೂ ಕೆಲವು ಪಂಗಡದವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಹೀಗೆ ನಗರದ ಮೂರು ಕಡೆ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.
ದಿನದ ಬೆಳಗ್ಗೆ ಕುಟುಂಬದ ಸದಸ್ಯರೆಲ್ಲರೂ ಹೊಸ ಉಡುಪು ಧರಿಸಿ ಸಿಹಿ ಊಟ ಸೇವಿಸಿ ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ತೆರಳಿದರು. ಪರಸ್ಪರ ಆಲಿಂಗನ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ಕಳೆದ ಒಂದು ತಿಂಗಳಿಂದ ಆಚರಿಸಿಕೊಂಡು ಬಂದಿರುವ ಉಪವಾಸ ವ್ರತ (ರೋಜಾ) ಈ ರಂಜಾನ್ ಹಬ್ಬದೊಂದಿಗೆ ಮುಕ್ತಾಯವಾಗೊಂಡಿತು. ಇಂತಹ ಪವಿತ್ರ ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ದೇವರ ಕುರಿತು ಏಕಾಗ್ರತೆ ಮೂಡಿಸಲು ಸಾಧ್ಯವೆಂದು ಮುಸ್ಲಿಂ ಹಿರಿಯ ಮುಖಂಡರು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕಾಂಗ್ರೆಸ್ ಮುಖಂಡ ನೂರ್ ಆಹ್ಮದ್, ವಕೀಲ ಬಸವರಾಜ್ ಸಂಗಪ್ಪನವರ್, ಎಚ್. ವಸಂತಪ್ಪ, ಸಿ. ಜಾವೇದ್, ಎಲ್. ಮಂಜ್ಯಾನಾಯ್ಕ, ಶೇಕ್ಷಾವಲಿ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ್, ಜಾಕೀರ್ ಸರ್ಕಾವಸ್ , ಇಸ್ಮಾಯಿಲ್ ಎಲಿಗಾರ್, ಸೋಗಿ ಇಬ್ರಾಹಿಂ, ನದೀಮ್ ಅಕ್ರಂ, ನಾಲ್ಬಂದಿ ನಿಸ್ಸಾರ್, ಎಂ. ದಾದಾಪೀರ್, ಕೋಳಿ ಮಕ್ಬಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.