ಇಲ್ಲಿನ ಕಾಜುಬಾಗ ಕೊಂಕಣಿ ಖಾರ್ವಿ ಸಮುದಾಯದ ವತಿಯಿಂದ ಸೋಮವಾರ ಸಂಜೆ ನಗರದ ಸಾಗರ ಮಾತ್ಸ್ಯಾಲಯದ ಹಿಂಭಾಗದ ಕಡಲತೀರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಮುದ್ರ ಪೂಜೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ಸಾಗರಮಾಲಾ ಯೋಜನೆ ವಿರೋಧಿಸಿ ಖಾರ್ವಿ ಸಮುದಾಯದಿಂದ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಕಾರವಾರಇಲ್ಲಿನ ಕಾಜುಬಾಗ ಕೊಂಕಣಿ ಖಾರ್ವಿ ಸಮುದಾಯದ ವತಿಯಿಂದ ಸೋಮವಾರ ಸಂಜೆ ನಗರದ ಸಾಗರ ಮಾತ್ಸ್ಯಾಲಯದ ಹಿಂಭಾಗದ ಕಡಲತೀರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಮುದ್ರ ಪೂಜೆಯನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.ಪಾತಿ ದೋಣಿ, ಏಂಡಿ ಬಲೆ, ಪಟ್ಟೆ ಹೊಡೆ ಮುಂತಾದ ಪಾರಂಪರಿಕ ಮೀನುಗಾರಿಕೆ ವಿಧಾನಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಮೀನುಗಾರರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಮಳೆ, ಬಿರುಗಾಳಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸದಿರಲಿ. ಎಲ್ಲರಿಗೂ ಸುಗಮ ಮೀನುಗಾರಿಕೆಗೆ ಅನುಕೂಲವಾಗಲಿ ಎಂದು ಸಮುದ್ರ ದೇವತೆ ಹಾಗೂ ಶ್ರೀ ಸತ್ಯನಾರಾಯಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಕಳೆದ 9 ವರ್ಷಗಳಿಂದಲೂ ಈ ಸಮುದಾಯವು ಪ್ರತಿವರ್ಷ ನಿರಂತರವಾಗಿ ಸಮುದ್ರ ಪೂಜೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಆ ಸಂಪ್ರದಾಯವನ್ನು ಭಕ್ತಿಪೂರ್ವಕವಾಗಿ ಮುಂದುವರಿಸಿದೆ. ಇದೇ ವೇಳೆ ಸಮುದಾಯದ ಮಹಿಳೆಯರು ಕಡಲತಾಯಿಗೆ ಅರಿಶಿಣ-ಕುಂಕುಮ ಅರ್ಪಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಒಪ್ಪಿಸಿದರು.ಸಾಂಪ್ರದಾಯಿಕ ಮೀನುಗಾರರ ಬದುಕಿಗೆ ಕಂಟಕವಾಗಲಿದೆ ಎನ್ನಲಾದ ಉದ್ದೇಶಿತ ಸಾಗರಮಾಲಾ ಯೋಜನೆ ಯು ಯಾವುದೇ ಕಾರಣಕ್ಕೂ ಜಾರಿಯಾಗದಿರಲಿ, ಮೀನುಗಾರರ ನೆಲೆ ಹಾಗೂ ಬದುಕನ್ನು ರಕ್ಷಿಸು ಎಂದು ಪೂಜೆಯ ಸಂದರ್ಭದಲ್ಲಿ ದೇವರಲ್ಲಿ ಒಕ್ಕೊರಲಿನಿಂದ ಪ್ರಾರ್ಥಿಸಲಾಯಿತು. ಇದು ಪೂಜೆಯ ಪ್ರಮುಖ ಆಕರ್ಷಣೆಯಾಗಿತ್ತು.ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ರೇಷ್ಮಾ ಮಾಳ್ಸೇಕರ್, ತುಕಾರಾಮ ಬಾನಾವಳಿ, ಘನಶ್ಯಾಮ ಸುರಂಗೇಕರ್, ಗಣಪತಿ ಮಾಂಗ್ರೆ, ಉದಯ ತುಕಾರಾಮ ಬಾನಾವಳಿ, ಕೃಷ್ಣ ಶಿವರಾಮ ಬಾನಾವಳಿ, ಮಹೇಂದ್ರ ಬಾನಾವಳಿ, ಸೂರಜ್ ಕುರುಮಕರ್ ಸೇರಿದಂತೆ ಸಮುದಾಯದ ನೂರಾರು ಮಂದಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.