ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಕಲೇಶಪುರ ತಾಲೂಕು ಕಸಬಾ ವ್ಯಾಪ್ತಿಯ ರಸ್ತೆ ಅಗಲೀಕರಣಕ್ಕೆ ಬೇಕಾಗುವ ಸರ್ಕಾರಿ ಜಾಗವನ್ನು ಕಬಳಿಸುತ್ತಿರುವವರ ವಿರುದ್ಧ ಕಸಬಾ ವ್ಯಾಪ್ತಿಯ ಇನ್ಸ್ಪೆಕ್ಟರ್, ರೆವಿನ್ಯೂ ಮತ್ತು ಸಕಲೇಶಪುರ ಉಪವಿಭಾಗಾಧಿಕಾರಿಗಳು ಕ್ರಮ ತೆಗೆದುಕೊಳ್ಳಲು ವಿಳಂಬವಾದರೆ ನೊಂದ ರೈತರು ಮತ್ತು ಸಾರ್ವಜನಿಕರು ನಿಮ್ಮ ಕಚೇರಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜ್ಯ ರೈತ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.ಇದೇ ವೇಳೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ. ಧರ್ಮರಾಜ್ ಮಾಧ್ಯಮದೊಂದಿಗೆ ಮಾತನಾಡಿ, ಸಕಲೇಶಪುರ ತಾಲೂಕು ಕಸಬಾ ಹೋಬಳಿ, ಕಡಬನಹಳ್ಳಿ ಗ್ರಾಮದ ಸರ್ವೆ ನಂಬರ್ ೧೪ರ ರಾಜ್ಯ ಹೆದ್ದಾರಿಯ ಬದಿಯ ರಸ್ತೆ ಅಗಲೀಕರಣಕ್ಕೆ ಬೇಕಾದ ಸರ್ಕಾರಿ ಜಾಗವನ್ನು ಚಂದ್ರೇಗೌಡ ಮತ್ತು ರವೀಂದ್ರ ಎಂಬ ಪ್ರಿಂಟಿಂಗ್ ಪ್ರೆಸ್ ಉದ್ಯಮ ನಡೆಸುವ ಅಪ್ಪ ಮಕ್ಕಳು ಇತ್ತೀಚಿನ ದಿನಗಳಲ್ಲಿ ಆಕ್ರಮವಾಗಿ ಒತ್ತುವರಿ ಮಾಡಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ಜಮೀನಿಗೆ ಕೃಷಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಓಡಾಡುವ ರೈತರಿಗೆ ತೊಂದರೆ ಆಗುತ್ತಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸರ್ಕಾರಕ್ಕೆ ಸರ್ಕಾರದ ಆಸ್ತಿಪಾಸ್ತಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೂ ಕೂಡ ತೊಂದರೆಯಾಗಿರುತ್ತದೆ ಎಂದು ದೂರಿದರು. ಇದಕ್ಕೆ ಜನವರಿಯಿಂದ ನಿರಂತರವಾಗಿ ತಹಸೀಲ್ದಾರರಿಗೆ ಮತ್ತು ಉಪ ವಿಭಾಗ ಅಧಿಕಾರಿಗಳಿಗೆ ನೊಂದ ರೈತರು ವಿವಿಧ ಸಂಘಟನೆಗಳ ಮುಖಾಂತರ ಮನವಿ ಸಲ್ಲಿಸಿದರು ಕೂಡ ಪ್ರಯೋಜನವಾಗಿಲ್ಲ. ತಹಸೀಲ್ದಾರ್ ಚಂದ್ರೇಗೌಡ ಅವರಿಗೆ ಒಂದು ನೋಟಿಸ್ ಜಾರಿ ಮಾಡಿರುತ್ತಾರೆ ಅಷ್ಟೇ, ಉಪವಿಭಾಗಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಬದಲಾಗಿ ಹತ್ತಾರು ವರ್ಷಗಳ ಹಿಂದೆ ಮಂಜೂರಾದ ಭೂಮಿಯನ್ನು ಕಾಡುಪ್ರಾಣಿಗಳ ಹಾವಳಿಯ ನಡುವೆಯೂ ಕೂಡ ಬಡ ರೈತ ತಮ್ಮ ಕುಟುಂಬ ನಿರ್ವಹಣೆಗಾಗಿ ತನ್ನ ಬದುಕನ್ನು ಕಟ್ಟಿಕೊಂಡಿರುವ ಮಂಜೂರಾದ ಭೂಮಿಯನ್ನು ಇಲ್ಲಸಲ್ಲದ ಕಾರಣಗಳ ಹೇಳಿ ಮಂಜೂರಾತಿಯನ್ನು ರದ್ದುಪಡಿಸಿ ರೈತ ಕುಟುಂಬಗಳನ್ನು ಬೀದಿಗೆ ತಳ್ಳುವ ಪ್ರಯತ್ನವನ್ನು ಸಕಲೇಶಪುರ ವಿಭಾಗಾಧಿಕಾರಿಗಳು ಮಾಡಿರುತ್ತಾರೆ ಎಂದರು.
ತಹಸೀಲ್ದಾರ್ ಮಾಡಿರುವ ನೋಟಿಸ್ ಮೇರೆಗೆ ಕ್ರಮ ತೆಗೆದುಕೊಂಡು ಸರ್ಕಾರಿ ಆಸ್ತಿಪಾಸ್ತಿ ಉಳಿಸುವ ನಿಟ್ಟಿನಲ್ಲಿ ಮತ್ತು ರೈತರ ಹಿತದೃಷ್ಟಿ ಕಾಪಾಡುವಲ್ಲಿ ತನ್ನ ಕರ್ತವ್ಯವನ್ನು ನಿಭಾಯಿಸದೆ ಸರ್ಕಾರಕ್ಕೆ ಮತ್ತು ಬಡ ರೈತರಿಗೆ ಅನ್ಯಾಯವನ್ನು ಎಸೆಗುತ್ತಿರುವ ಕಸಬಾ ವ್ಯಾಪ್ತಿಯ ರೆವಿನ್ಯೂ ಇನ್ಸ್ಪೆಕ್ಟರ್ ಅನ್ನು ಕೂಡಲೇ ಅಮಾನತಿಗೆ ಕ್ರಮ ತೆಗೆದುಕೊಂಡು ಸರ್ಕಾರಕ್ಕೆ ಮತ್ತು ರೈತರಿಗೆ ನ್ಯಾಯ ಕೊಟ್ಟು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೆ ತನ್ನ ಮನಸೋಯಿಚ್ಛೆ ಬಡ ರೈತರ ಮತ್ತು ಸಾರ್ವಜನಿಕರ ಮುಂದೆ ನಡೆದುಕೊಳ್ಳುವ ಪ್ರಸ್ತುತ ಸಕಲೇಶಪುರ ಉಪವಿಭಾಗಾಧಿಕಾರಿಗಳನ್ನು ಮುಂದೆ ಯಾವುದೇ ಸಾರ್ವಜನಿಕ ಮತ್ತು ರೈತರಿಗೆ ನ್ಯಾಯ ತೀರ್ಮಾನ ಕೊಡುವ ಹುದ್ದೆಗಳಿಗೆ ನೇಮಿಸಬಾರದೆಂದು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಮನವಿ ಮಾಡಿದರು.ಸಕಲೇಶಪುರ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ರೆವಿನ್ಯೂ ಇನ್ಸ್ಪೆಕ್ಟರ್ ಮತ್ತು ಉಪ ವಿಭಾಗಾಧಿಕಾರಿಗಳು ಮೇಲೆ ಕ್ರಮ ತೆಗೆದುಕೊಳ್ಳಲು ವಿಳಂಬವಾದರೆ ಸಕಲೇಶಪುರ ಕಸಬಾ ವ್ಯಾಪ್ತಿಯ ನೊಂದ ರೈತರು ಮತ್ತು ಸಾರ್ವಜನಿಕರು ನಿಮ್ಮ ಕಚೇರಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಈ ಮೂಲಕ ರೈತರ ತೀರ್ಮಾನವಾಗಿರುತ್ತದೆ. ಮುಂದಿನ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿ ಮನವಿ ಮಾಡಿದರು.
ಇದೇ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಪವನ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಮಹೇಶ್, ನಾಗೇಶ್, ಕನ್ನಡ ಹೋರಾಟ ಸಂಘಟನೆಯ ನಾಗರಾಜು ಇತರರು ಉಪಸ್ಥಿತರಿದ್ದರು.