ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ₹38 ಸಾವಿರ ಕೋಟಿ ಬಿಲ್‌ಗಾಗಿ ಆಗ್ರಹಿಸಿ ಮಾ.6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಆರ್‌.ಮಂಜುನಾಥ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.6ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 30 ಸಾವಿರ ಗುತ್ತಿಗೆದಾರರು ಭಾಗಿಯಾಗಲಿದ್ದು, ಅಂದು ಒಂದು ದಿನದ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು. ಆಗಲು ಸಹ ಸಿಎಂ ಹಾಗೂ ಸರ್ಕಾರ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸದಿದ್ದರೆ ನಂತರ ಏಪ್ರಿಲ್‌ನಿಂದ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಠಾವಧಿಯ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ನೋಂದಾಯಿತ ಗುತ್ತಿಗೆದಾರರಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಗುತ್ತಿಗೆದಾರರು ಮಾಡಿರುವ ಸರ್ಕಾರಿ ಕಾಮಗಾರಿಗಳ ಬಿಲ್ ಬಾಕಿಯಿದೆ. 2021ರಿಂದ ಇದುವರೆಗೆ ಲೋಕೋಪಯೋಗಿ, ಕೆಬಿಜೆಎನ್‌ಎಲ್, ಜಲಸಂಪನ್ಮೂಲ, ಸಣ್ಣ ನೀರಾವರಿ, ಜೆಜೆಎಂ ಯೋಜನೆ, ಆರ್‌ಡಿಪಿಆರ್‌ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ₹38 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದು, ವಿಜಯಪುರ ಜಿಲ್ಲೆಯೊಂದರಲ್ಲೇ ವಿವಿಧ ಇಲಾಖೆಗಳಲ್ಲಿ ಸೇರಿ ಒಟ್ಟು ₹2364 ಕೋಟಿ ಬಾಕಿಯಿದೆ. ಈ ಬಗ್ಗೆ ಸಂಬಂಧಿತ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರು ಕಳೆದೊಂದು ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಹಲವುಬಾರಿ ಸಭೆ ಕರೆದು ಕೊನೆ ಕ್ಷಣದಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ. ತಕ್ಷಣವೇ ಸಿಎಂ ಗುತ್ತಿಗೆದಾರರ ಸಭೆ ಕರೆದು, ಕಾಂಟ್ರಾಕ್ಟರ್ಸ್ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಇನ್ನು ಕೆಲವರು ಇಲಾಖೆ ಸಚಿವರು ನೇರವಾಗಿ ಆಡಳಿತ ನಡೆಸದೆ, ಮಧ್ಯವರ್ತಿಗಳಿಂದ ಆಡಳಿತ ನಡೆಸುತ್ತಿದ್ದಾರೆ. ಇಲಾಖೆಯ ಮುಖ್ಯ ಎಂಜಿನಿಯರ್‌ಗಳನ್ನು ಕೆಲ ಸಚಿವರು ಅವರ ಖಾಸಗಿ ಆಫೀಸ್‌ಗಳಿಗೆ ಕರೆಸಿಕೊಂಡು ವ್ಯವಹರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಮಿಷನ್ ಹಾವಳಿ ಹೆಚ್ಚಾಗಿದೆ:


ಈ ಹಿಂದಿನ ಸರ್ಕಾರಗಳಲ್ಲೂ ಕಮಿಷನ್ ಇತ್ತು, ಈಗಲೂ ಕಮಿಷನ್ ಇದೆ, ಕಮಿಷನ್ ಇಲ್ಲ ಎಂದು ಹೆಳೋಕೆ ಆಗಲ್ಲ. ಈ ಕಮಿಷನ್ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಗುವುದಿಲ್ಲ, ಬದಲಾಗಿ ಅದನ್ನು ನಿಯಂತ್ರಣ ಮಾಡಬೇಕಿದೆ. ದುರಂತ ಎಂದರೆ ಹಳೆಯ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಜಾಸ್ತಿಯೇ ಇದೆ. ಇವರು ಮೂರು ವರ್ಷಗಳ ಹಳೆ ಬಿಲ್‌ಗಳಿಗೂ ಕೆಲವು ಇಲಾಖೆಗಳಲ್ಲಿ ಈಗಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರ್‌.ಮಂಜುನಾಥ ಆರೋಪಿಸಿದರು. ಇನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಳಿಯಲ್ಲಿ ದುಡ್ಡಿಲ್ಲ, ಅವರ ಬಳಿ ಹಣವಿದ್ದಿದ್ದರೆ ಅವರು ಇಷ್ಟೊತ್ತಿಗೆ ಗುತ್ತಿಗೆದಾರರ ಬಿಲ್ ಪಾವತಿ ಮಾಡುತ್ತಿದ್ದರು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದಿರುವುದಿಂದಲೇ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡಿರಬೇಕು ಎಂದು ಸಂಶಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರಾದ ಸಿ.ಆರ್.ರೂಡಗಿ, ಎಸ್.ಐ.ಡೋಣೂರಮಠ, ಅರುಣ ಮಠ, ಸಿದ್ದು ಬಿರಾದಾರ, ಎಲ್.ಡಿ.ಮಡಗೊಂಡ, ಐ.ಎಂ.ಪಟ್ಟಣಶೆಟ್ಟಿ, ಜಗದೀಶ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ರೇವಣಸಿದ್ದಪ್ಪ ನೋಟಗಾರ, ಎ.ಎಸ್.ಪಾಟೀಲ ಇದ್ದರು.