ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ಕನ್ನಡಪ್ರಭ ವಾರ್ತೆ ಹಾಸನ
ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಆರಾಧನ ಎಸ್ಟೇಟ್ನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಷೇಧಿಸಬೇಕು. ಇಲ್ಲವಾದರೇ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಕೊಡಗಿನ ಕಾವೇರಿ ಸೇನೆ ಅಧ್ಯಕ್ಷ ಕೆ.ಎ. ರವಿಚಂಗಪ್ಪ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಹಿಂದೆ ಈ ಸ್ಥಳದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಇದರಿಂದಾಗಿ ಪರಿಸರದ ಮೇಲೆ ಹಾನಿ ಉಂಟಾಗುತ್ತದೆ. ಸ್ಫೋಟಕಗಳನ್ನು ಬಳಸುವುದರಿಂದ ನೀರಿನ ಅಂತರ್ಜಲ ಮಟ್ಟ ಕುಸಿಯುತ್ತದೆ. ಬೆಟ್ಟಗುಡ್ಡಗಳು ಮರಗಿಡಗಳು, ಮಳೆ ಮಾರುತಗಳನ್ನು ತಡೆದು ಆಕರ್ಷಿಸಿ ಯಥೇಚ್ಛವಾಗಿ ಮಳೆ ಸುರಿಸುತ್ತವೆ. ಈ ನೀರು ಹರಿದು ಹೇಮಾವತಿ, ಕಾವೇರಿ ನದಿಗೆ ಸೇರುತ್ತದೆ. ಲಕ್ಷಾಂತರ ರೈತರ ಜೀವನಾಡಿ ಆಗಿದೆ, ಕುಡಿಯುವ ನೀರು ಒದಗಿಸುತ್ತಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಅಮೂಲ್ಯ ಗಿಡ ಮೂಲಿಕೆಗಳು, ಪ್ರಾಣಿ ಪಕ್ಷಿಗಳು, ಸಸ್ತನಿಗಳು, ಕೀಟಗಳು, ಕಂಡುಬರುತ್ತಿವೆ. ಈಗಾಗಲೇ ಕಾಡಾನೆ, ಕಾಡುಕೋಣ, ಚಿರತೆ, ನವಿಲು, ಕಾಡುಹಂದಿಗಳು, ಆಹಾರವಿಲ್ಲದೆ ರೈತರು ಬೆಳೆದ ಗೆಡ್ಡೆಗೆಣಸು, ಭತ್ತ, ತರಕಾರಿ ನಾಶಮಾಡುತ್ತದೆ. ಇದರಿಂದಾಗಿ ರೈತರ ತೋಟ, ಗದ್ದೆಗಳಿಗೆ ತೆರಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಕಾಡುಪ್ರಾಣಿಗಳು ಜನನಿಬಿಡ ಪ್ರದೇಶಗಳಿಗೆ ಬರುತ್ತಿರುವುದು ಮರಗಿಡಗಳು, ಕಾಡುನಾಶವಾಗಿ ಆಹಾರದ ಕೊರತೆ ಮುಖ್ಯಕಾರಣವಾಗಿದೆ ಎಂದು ಹೇಳಿದರು.ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನೆಡೆಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ರಾಜ್ಯಪಾಲರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಭೇಟಿ ಮಾಡಿ ಮನವಿ ಸಲ್ಲಿಸಿ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಈಗ ಪುನಃ ಅನುಮತಿ ಪಡೆದಿದ್ದೇವೆ ಎಂದು ಜೆಸಿಬಿ ಮೂಲಕ ಮರಗಿಡಗಳನ್ನು ನಾಶಮಾಡಿ ಸಮತಟ್ಟು ಮಾಡುತ್ತಿದ್ದಾರೆ. ಈಗಾಗಲೇ ಬರಪರಿಸ್ಥಿತಿ ಉಂಟಾಗಿದ್ದು ಬೆಳೆ ನಾಶವಾಗಿವೆ. ಆದ್ದರಿಂದ ಗಣಿಗಾರಿಕೆ ನಡೆಯದಂತೆ, ಬೆಟ್ಟಗುಡ್ಡಗಳು ಮರಗಿಡಗಳು ನಾಶವಾಗದಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ನದಿ ಮೂಲಗಳ ಉಗಮಸ್ಥಾನ, ಪ್ರಾಣಿ ಪಕ್ಷಿಗಳು, ಕೀಟಗಳು, ಸಸ್ತನಿಗಳು, ರೈತರು ಇನ್ನಿತರ ಜೀವನಾಡಿಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರಾದ ಎಚ್.ಕೆ. ರಮೇಶ್, ಕಾವೇರಿ ಸೇನೆಯ ಕೊಡಗು ಉಪಾಧ್ಯಕ್ಷ ಶಶಿಧರ್, ಪುಟ್ಟಸ್ವಾಮಿಗೌಡ, ಎಚ್.ಟಿ. ಗಣೇಶ್, ಟಿ.ಎನ್. ಹರೀಶ್ ಇದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ಸೇನೆ ಅಧ್ಯಕ್ಷ ರವಿ ಚಂಗಪ್ಪ. ಗ್ರಾಮಸ್ಥರಾದ ಎಚ್.ಕೆ. ರಮೇಶ್, ಕಾವೇರಿ ಸೇನೆಯ ಕೊಡಗು ಉಪಾಧ್ಯಕ್ಷ ಶಶಿಧರ್, ಪುಟ್ಟಸ್ವಾಮಿಗೌಡ, ಎಚ್.ಟಿ. ಗಣೇಶ್, ಟಿ.ಎನ್. ಹರೀಶ್ ಇದ್ದರು.