ಸಾಗರತಾಲೂಕಿನ ಭವಿಷ್ಯಕ್ಕೆ ಮಾರಕವಾಗುವ ಅಣು ವಿದ್ಯುತ್ ಸ್ಥಾವರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಒತ್ತಾಯಿಸಿದರು.
ಸಾಗರದ ಶಿವಪ್ಪನಾಯಕ ವೃತ್ತದಿಂದ ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತೆರಳಿ ಸಮಾವೇಶ: ಬಿ.ಆರ್.ಜಯಂತ್
ಕನ್ನಡಪ್ರಭ ವಾರ್ತೆ, ಸಾಗರತಾಲೂಕಿನ ಭವಿಷ್ಯಕ್ಕೆ ಮಾರಕವಾಗುವ ಅಣು ವಿದ್ಯುತ್ ಸ್ಥಾವರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಒತ್ತಾಯಿಸಿದರು.ತಾಲೂಕಿನ ಕೋಳೂರು ಗ್ರಾಮದ ಬೇಸೂರು ಬಸವಣ್ಣ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಣು ಸ್ಥಾವರ ನಿರ್ಮಾಣವಾದ ಪ್ರದೇಶಗಳ ಪರಿಸ್ಥಿತಿ ಗಮನಿಸಿದ್ದೇವೆ. ನಮ್ಮ ಭಾಗ ಸಹ ಅಂತಹ ಧಾರುಣ ಸ್ಥಿತಿ ಎದುರಿಸುವುದು ಬೇಡ ಎಂದರು.ಅಣು ವಿದ್ಯುತ್ ಸ್ಥಾವರದ ವಿರುದ್ಧ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇದು ನಮ್ಮೂರಿನ ಅಳಿವು ಉಳಿವಿನ ಪ್ರಶ್ನೆ ಯಾಗಿದೆ. ಉಪವಿಭಾಗಾಧಿಕಾರಿಗಳಿಗೆ ಮನವಿ ಕೊಡುವ ಜೊತೆಗೆ ಯೋಜನೆ ಕೈಬಿಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ಜನರು ಅಹೋರಾತ್ರಿ ಧರಣಿ ನಡೆಸಲು ಹಿಂದೇಟು ಹಾಕಬಾರದು. ಈಗಾಗಲೆ ಬೇಸೂರು ಭಾಗದ ಜನರು ಎರಡು ಬಾರಿ ಮುಳುಗಡೆಯಾಗಿ ಬದುಕು ಕಟ್ಟಿ ಕೊಳ್ಳುತ್ತಿದ್ದಾರೆ. ಇವರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳಿಸುತ್ತೀರಿ. ಎಲ್ಲಿಯೂ ಒಂದಿಂಚು ಭೂಮಿ ಇಲ್ಲ. ಈ ಕುಟುಂಬಗಳನ್ನು ಒಕ್ಕಲೆಬ್ಬಿಸಿದರೆ ಅವರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಮಲೆನಾಡನ್ನು ಮಸಣ ಮಾಡುವ ಹೊಸ ಹೊಸ ಯೋಜನೆಗಳನ್ನು ತಂದು ನಮ್ಮ ಮೇಲೆ ಹೇರಲಾಗುತ್ತಿದೆ. ಅಣು ವಿದ್ಯುತ್ ಸ್ಥಾವರದ ವಿರುದ್ಧ ಲಕ್ಷಾಂತರ ಒಮ್ಮತದ ವಿರೋಧಿ ಧ್ವನಿ ಮೊಳಗಿಸಬೇಕು. ಶಾಸಕರು, ಸಂಸದರ ಮಾತನ್ನು ಕೇಳದೆ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ವರ್ತಿಸು ತ್ತಿದ್ದಾರೆ. ಅವರಿಗೆ ತಕ್ಕಪಾಠ ಕಲಿಸುವ ಜೊತೆಗೆ ಅಣು ಸ್ಥಾವರ ಸೇರಿ ಯಾವ ಯೋಜನೆ ಮಲೆನಾಡಿನಲ್ಲಿ ಅನುಷ್ಠಾನ ಮಾಡದಂತೆ ಒತ್ತಡ ತರುವ ಈ ಅವಕಾಶ ಬಳಸಿಕೊಳ್ಳೋಣ ಎಂದರು.ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ಮೇ ೭ರಂದು ಬೇಸೂರು ಅಣು ಸ್ಥಾವರ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆ ದಿನ ಬೆಳಿಗ್ಗೆ ೧೦ಕ್ಕೆ ಸಾಗರದ ಶಿವಪ್ಪನಾಯಕ ವೃತ್ತದಲ್ಲಿ ಸಹಸ್ರಾರು ಜನರು ಯೋಜನೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಮೆರವಣಿಗೆ ಮೂಲಕ ಗಾಂಧಿ ಮೈದಾನದಲ್ಲಿ ಸಮಾವೇಶಗೊಳ್ಳಲಾಗುತ್ತದೆ. ನಂತರ ಅಲ್ಲಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಈ ಜನಾಂದೋಲನ ಹೋರಾಟ ಪಕ್ಷಾತೀತವಾಗಿ ನಡೆಯಲಿದ್ದು, ಜನಪ್ರತಿನಿಧಿಗಳು, ಪರಿಸರ ಸಂಘಟನೆಗಳು, ವಿವಿಧ ಸಂಘಸAಸ್ಥೆಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಮಂಜಪ್ಪ, ಬಸಪ್ಪ, ಗಂಗಾಧರ ಗೌಡ, ಅಶೋಕ, ಹಾಲಪ್ಪ ಗೌಡ, ಶೋಭಾ, ಯಶೋಧ, ರೂಪಾ, ಶಾರದಾ, ನಾರಾಯಣ ಇನ್ನಿತರರು ಹಾಜರಿದ್ದರು. ೩೦ಕೆ.ಎಸ್.ಎ.ಜಿ.೧ಅಣುಸ್ಥಾವರ ಸ್ಥಾಪನೆ ವಿರೋಧಿಸಿ ಪೂರ್ವಭಾವಿ ಸಭೆ ನಡೆಯಿತು