ಮಡಿಕೇರಿಯಲ್ಲಿ ಅರೆಭಾಷೆ ಗೌಡರಿಂದ ಬೃಹತ್ ಮೌನ ಪ್ರತಿಭಟನೆ

| Published : Jan 21 2025, 12:35 AM IST

ಸಾರಾಂಶ

ಅರೆಭಾಷಿಕ ಗೌಡ ಸಂಘಟನೆಗಳ ಸಾವಿರಾರು ಮಂದಿಯಿಂದ ಗೌಡ ಸಮುದಾಯದ ಸ್ವಾಭಿಮಾನದ ನಡೆ ಮೌನ ಬೃಹತ್‌ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅರೆಭಾಷಿಕ ಗೌಡ ಜನಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಸುಳ್ಳು ಇತಿಹಾಸ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ವಿವಿಧ ಅರೆಭಾಷಿಕ ಗೌಡ ಸಂಘಟನೆಗಳ ಸಾವಿರಾರು ಮಂದಿಯಿಂದ ಗೌಡ ಸಮುದಾಯದ ಸ್ವಾಭಿಮಾನದ ನಡೆ ಮೌನ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೊಡಗು ಗೌಡ ಯುವ ವೇದಿಕೆ, ಕೊಡಗು ಗೌಡ ಮಹಿಳಾ ಒಕ್ಕೂಟ, ಕುಶಾಲನಗರದ ಗೌಡ ಯುವಕ ಸಂಘ ಸೇರಿದಂತೆ ವಿವಿಧ ಗೌಡ ಸಂಘಟನೆಗಳ ನೇತೃತ್ವದಲ್ಲಿ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ನಡೆಸಿದರು.

ನಗರದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸಾಂಪ್ರದಾಯಿಕ ಉಡುಪು ತೊಟ್ಟ ಅರೆಭಾಷಾ ಪುರುಷರು ಹಾಗೂ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಜಿಲ್ಲಾಡಳಿತದ ಗಮನ ಸೆಳೆದರು.

ಯಾವುದೇ ಘೋಷಣೆಗಳನ್ನು ಕೂಗದ ಪ್ರತಿಭಟನಾಕಾರರು ಭಿತ್ತಿಪತ್ರಗಳ ಮೂಲಕ ಮೌನ ಧ್ವನಿಯನ್ನು ಮೊಳಗಿಸಿದರು. ಕೊಡಗು ಒಂದು ಸಮುದಾಯದ ಸ್ವತ್ತಲ್ಲ, ಸರ್ವ ಸಮುದಾಯದ ಅಮೂಲ್ಯ ಸಂಪತ್ತು ಎಂದು ಭಿತ್ತಿಪತ್ರಗಳನ್ನು ಹಿಡಿದು ಸಾಗಿದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರ ಬಳಿ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಅರೆಭಾಷಿಕ ಗೌಡ ಸಂಘಟನೆಗಳ ಪ್ರಮುಖರು ಮನವಿ ಪತ್ರವನ್ನು ಸಲ್ಲಿಸಿ ಸಿಎನ್‌ಸಿ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಸಿಎನ್‌ಸಿಯ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸಂಗಡಿಗರು ಅರೆಭಾಷಿಕ ಗೌಡ ಜನಾಂಗದವರು ವಲಸೆ ಬಂದವರೆಂದು ಅಪಪ್ರಚಾರ ಮಾಡಿ ನಿರಂತರವಾಗಿ ಪ್ರಚೋದನಾಕಾರಿ ಮತ್ತು ಆಕ್ಷೇಪಾರ್ಹ ನಿಂದನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ನಾಚಪ್ಪ ಅವರನ್ನು ಬಂಧಿಸಬೇಕು ಮತ್ತು ಸಿಎನ್‌ಸಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಅರೆಭಾಷಿಕರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರ ವೆಂಕಟ್ ರಾಜಾ ಅವರು, ತಾವು ಸಲ್ಲಿಸಿರುವ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಾನೂನಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಕಾನೂನು ಸಲಹೆಗಾರ ಕೊಂಬಾರನ ರೋಷನ್ ಗಣಪತಿ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹಲವು ಸಂಘಟನೆಗಳು ಭಾಗಿ: ಗೌಡ ಸಮುದಾಯದವರ ಪ್ರತಿಭಟನೆಯಲ್ಲಿ ಗೌಡ ಸಮಾಜ ಗಾಳಿಬೀಡು, ಗೌಡ ಸಮಾಜ ಮದೆನಾಡು, ಮಕ್ಕಂದೂರು, ಪಿರಿಯಾಪಟ್ಟಣ, ಐಗೂರು, ಗೌಡ ಸಮಾಜ ಭಾಗಮಂಡಲ, ಭಾಗಮಂಡಲ ನಾಡು ಯುವ ಒಕ್ಕೂಟ, ಕೊಡಗು ಗೌಡ ವಿದ್ಯಾಸಂಘ ಹಾಸನ, ಕೊಡಗು ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ವಿದ್ಯಾಸಂಘ, ಮಡಿಕೇರಿ, ಗೌಡ ಸಮಾಜ ಸುಂಟಿಕೊಪ್ಪ, ಗೌಡ ಸಮಾಜ ಹುಣಸೂರು, ಮೈಸೂರು, ಬೆಂಗಳೂರು ಜಿಲ್ಲೆಯ ಎಲ್ಲ ಗೌಡ ಮಹಿಳಾ ಒಕ್ಕೂಟಗಳು, ಮಡಿಕೇರಿ ನಗರದ 4 ಕೇರಿಯವರು,

ಗೌಡ ಸಮಾಜ ಪಾರಾಣೆ, ಚೆಯ್ಯಂಡಾಣೆ, ವಿರಾಜಪೇಟೆ, ಆಲೂರು ಸಿದ್ದಾಪುರ ಗೌಡ ಸಮಾಜ, ಕುಶಾಲನಗರ, ಸೋಮವಾರಪೇಟೆ, ಚೇರಂಬಾಣೆ, ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ ಮತ್ತು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಅಯ್ಯಪ್ಪ ಯುವಕ ಸಂಘ ಚೆಯ್ಯಂಡಾಣೆ, ನಾಡಪ್ರಭು ಒಕ್ಕಲಿಗರ ಕೇಂದ್ರ ಬೆಂಗಳೂರು, ಬಲ್ಲಮೂವಟಿ ಗೌಡ ಒಕ್ಕೂಟ, ಮೂರ್ನಾಡು ಗೌಡ ಸಮಾಜ, ಚೇರಳ ಗೌಡ ಸಮಾಜ, ಕಾಲೂರು ಗೌಡ ಸಮಾಜ, ಗೌಡ ನಿವೃತ್ತ ನೌಕರರ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಕುಶಾಲನಗರ, ಗೌಡ ಮಹಿಳಾ ಸ್ವಸಹಾಯ ಸಂಘ ಕುಶಾಲನಗರ, ಗೌಡ ಸಮಾಜ ಕುಶಾಲನಗರ, ಕುಶಾಲನಗರ ಅರೆಭಾಷೆ ಗೌಡ ಯೂತ್ಸ್, ಬಿಳಿಗೇರಿ ಗೌಡ ಬಳಗ, ಪೆರತ ಸಂಘ, ಕಲ್ಚರಲ್ ಅಸೋಶಿಯೇಷನ್ ಚೆಟ್ಟಳ್ಳಿ, ಕೊಡಗು ಗೌಡ ಯುವ ವೇದಿಕೆ ಜಿಪಿಎಲ್, ಫ್ರಾಂಚೈಸಿಗಳಾದ ಎಲೈಟ್ ಕ್ರಿಕೆಟ್ ಕ್ಲಬ್, ಕಾಫಿ ಕ್ರಿಕೆಟರ್ಸ್, ಮತ್ತು ಎಂಬಿಸಿ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.