ಸಾರಾಂಶ
ಗದಗ: ಕನ್ನಡ ನಾಡು- ನುಡಿ, ನೆಲ- ಜಲದ ಸಮಸ್ಯೆಗಳು ಎದುರಾದಾಗ ಅನೇಕ ಹೋರಾಟಗಳಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದಾದುದು. ಮಠಗಳು ಕನ್ನಡ ಉಳಿವಿಗಾಗಿ ಬೆಳವಣಿಗೆಗಾಗಿ ಪ್ರಯತ್ನಿಸಿದಾಗ ನಮ್ಮ ನಾಡು ನುಡಿ ಸಂಸ್ಕೃತಿ ಸಾಹಿತ್ಯ ಬೆಳೆಯಲು ಸಾಧ್ಯ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ತಿಳಿಸಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2770ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಕರ್ನಾಟಕದ ಗಡಿಭಾಗ ಚಿಂಚಣಿ ಹಾಗೂ ಭೈರನಹಟ್ಟಿಯಲ್ಲಿ ಭಾಷೆ ಉಳಿವಿಗಾಗಿ ಕನ್ನಡ ರಥವನ್ನು ಎಳೆಯುತ್ತಾರೆ. ಕರ್ನಾಟಕದಲ್ಲಿ ಕನ್ನಡ ಮಠವೆಂದರೆ ತೋಂಟದಾರ್ಯ ಮಠ. ಕನ್ನಡ ಜಗದ್ಗುರುಗಳೆಂದರೆ ಸಿದ್ದಲಿಂಗ ಶ್ರೀಗಳು. ಆರುನೂರಕ್ಕೂ ಹೆಚ್ಚು ಕನ್ನಡ ಮೌಲಿಕ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಧಾರವಾಡದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಮಾತನಾಡಿ, ಕನ್ನಡ ಮತ್ತು ಕರ್ನಾಟಕ ಎರಡು ಒಂದನ್ನೊಂದು ಬಿಟ್ಟಿರಲಾರವು. ಕರ್ನಾಟಕ್ಕೆ ಗಡಿ ಇದೆ. ಆದರೆ ಕನ್ನಡಕ್ಕೆ ಗಡಿಯ ಹಂಗಿಲ್ಲ. ಲಿಂಗಾಯತರಿಗೆ ಧರ್ಮ ಭಾಷೆ ಕನ್ನಡ ಒಂದೆ. ಸಿದ್ದಲಿಂಗ ಶ್ರೀಗಳು ಪೀಠಾಧಿಪತಿಗಳಾಗಿ ಕನ್ನಡ ಕೈಂಕರ್ಯಕ್ಕೆ ಕೊನೆಯುಸಿರು ಇರುವವರೆಗೂ ಹೋರಾಡಿದರು. ಕನ್ನಡದ ಜಗದ್ಗುರುಗಳೆ ಆದರು. ಶ್ರೀಮಠದಿಂದ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎಂದು ಹೇಳುತ್ತಿದ್ದರು.ಹು-ಧಾ ಮಹಾನಗರ ಪಾಲಿಕೆ ನೀಡುವ ರಾಜ್ಯೋತ್ಸವ ಧೀಮಂತ ಪ್ರಶಸ್ತಿಗೆ ಭಾಜನರಾದ ಶಶಿಧರ ತೋಡಕರ, ಕನ್ನಡ ಜಾನಪದ ಪರಿಷತ್ಗೆ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ನೇಮಕವಾದ ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ, ನೆಲ ಜಲ ಭಾಷೆಗಾಗಿ ಹೋರಾಟ ಮಾಡುತ್ತಿರುವ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಯಿತು.
ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅನ್ವಿತಾ ಪೋತದಾರ ಹಾಗೂ ವಚನ ಚಿಂತನವನ್ನು ತುಳಸಿಪ್ರಿಯಾ ಶಿರಹಟ್ಟಿ ಮಾಡಿದರು.ಮುಖ್ಯ ಅತಿಥಿಗಳಾಗಿ ಎಸ್.ಎಸ್. ಹರ್ಲಾಪೂರ ಉಪಸ್ಥಿತರಿದ್ದರು. ದಾಸೋಹ ಸೇವೆಯನ್ನು ಬಸಪ್ಪ ಅಮೃತಪ್ಪ ಪಲ್ಲೇದ, ಅಣ್ಣಿಗೇರಿ ವಹಿಸಿಕೊಂಡಿದ್ದರು. ತೋಂಟದಾರ್ಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಕುರಿತು ನೃತ್ಯ ಮತ್ತು ರೂಪಕಗಳ ಪ್ರದರ್ಶನ ನಡೆಯಿತು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.;Resize=(128,128))