ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಾಜದ ನಾಯಕನಾಗಲು ಉತ್ತಮ ಕೌಶಲ್ಯತೆ ಹಾಗೂ ಪ್ರಬುದ್ಧತೆ ಬೇಕಾಗಿದ್ದು, ಸಂಸ್ಕಾರವೆಂಬುದು ಅತಿ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ''''''''ನಾಯಕತ್ವ ಕೌಶಲ್ಯಗಳು: ನಾಯಕ/ಕಿ ಎಂದರೆ ಯಾರು?'''''''' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಮಗೆ ನಾವೇ ನಿಜವಾದ ನಾಯಕರು. ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಜನಪ್ರತಿನಿಧಿ ಆದವರು ಮಾತ್ರ ನಾಯಕರಲ್ಲ, ಕ್ರೀಡೆ, ಚಲನಚಿತ್ರ, ಕುಟುಂಬ ಎಲ್ಲಾ ಕಡೆಗಳಲ್ಲಿ ನಾಯಕರಿದ್ದಾರೆ. ಎಲ್ಲಿ ಒಳ್ಳೆಯ ಸಂಸಾರವಿದೆ, ಅಲ್ಲಿ ಒಳ್ಳೆಯ ಸಂಸ್ಕಾರವಿರುತ್ತದೆ. ಸಂಸ್ಕಾರದ ತಳಹದಿ ಇರುವುದು ಕುಟುಂಬದಲ್ಲಿ, ನಂತರ ಸಿಗುವುದು ಶಿಕ್ಷಣ ಮತ್ತು ಅನುಭವ ಆಧಾರಿತ ಸಂಸ್ಕಾರ. ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಪಾರದರ್ಶಕತೆ, ಸಮಯ ಪಾಲನೆ, ಪ್ರಬುದ್ದ ಮಾತುಗಾರಿಕೆಯ ಜೊತೆಯಲ್ಲಿ ಸಹನೆ ಮತ್ತು ಅಧ್ಯಯನಶೀಲತೆ ಉತ್ತಮ ನಾಯಕತ್ವಕ್ಕೆ ಅತಿ ಮುಖ್ಯ.ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಅಧಿಕಾರದ ಹಂಬಲವಿರಬಾರದು. ನಾಯಕತ್ವ ಎಂದರೇ ಬದ್ಧತೆಯ ಸಂಕೇತ. ಅಹಂಕಾರ, ಹಣ ದಾಹ, ಸ್ವಹಿತಾಸಕ್ತಿ, ಸ್ವಾರ್ಥ ಪರವಾದ ನಡೆ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ವಿರೋಧಿಗಳನ್ನು ಅವಹೇಳನ ಮಾಡುವ ಗುಣ ನಾಯಕನಿಗೆ ಇರಬಾರದು. ಮನುಷ್ಯನಲ್ಲಿ ಅತಿ ಭಾರವಾದ ವಸ್ತುವೆಂದರೆ ಅದು ಅಹಂಕಾರ. ನಾಯಕ ಹಿಂಬಾಲಕರನ್ನು ಸೃಷ್ಟಿಸದೆ ನಾಯಕರನ್ನು ರೂಪಿಸುವ ಶಕ್ತಿ ಇರಬೇಕು.
ಇನ್ನೊಬ್ಬರ ಕೌಶಲ್ಯತೆ ಸಾಮರ್ಥ್ಯಗಳನ್ನು ಗುರುತಿಸುವವರು ನಿಜವಾದ ನಾಯಕ. ನಾಯಕ ಸುದ್ದಿಯಲ್ಲಿರಬೇಕು ವಿನಃ ಸುದ್ದಿಯಾಗಲು ನಾಯಕರಾಗಬಾರದು. ಸೋಲಿನ ಜವಾಬ್ದಾರಿಯನ್ನು ತಾನು ವಹಿಸಿಕೊಂಡು, ಗೆಲುವನ್ನು ಎಲ್ಲರಿಗೂ ಹಂಚುವ ಸಾಮರ್ಥ್ಯ ಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಗಾಂಧೀಜಿ ಮತ್ತು ಸೇವಾ ಮನೋಭಾವ ಕುರಿತು ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸೇವೆ ಎನ್ನುವುದು ಒಂದು ದಿನಕ್ಕೆ ಸೀಮಿತವಾದ ಪರಿಕಲ್ಪನೆಯಲ್ಲ. ಗಾಂಧೀಜಿಯವರು ಹೇಳುವ ಹಾಗೆ, ನಮ್ಮ ಜೀವನದಲ್ಲಿ ಸಾಮಾಜಿಕ ಬದಲಾವಣೆಗೆ ನಿರಂತರ ಶ್ರಮಿಸಿದಾಗ ಮಾತ್ರ ನಿಜವಾದ ಸೇವಾ ಮನೋಭಾವ ಸಾಧ್ಯವಾಗುತ್ತದೆ.
ಗಾಂಧೀಜಿಯವರ ಮೌಲ್ಯ ಹೇಳುವಾಗ ಸರಳ ಜೀವನ ಮತ್ತು ಉನ್ನತ ಚಿಂತನೆ ದಾಟಿಯ ಅರಿವು ಮಾಡಿಕೊಳ್ಳಬೇಕು. ಬದಲಾವಣೆಗಳನ್ನು ಮೊದಲು ನಿನ್ನಲ್ಲಿ ಅಳವಡಿಸಿಕೊಂಡು, ನಂತರ ಸಮಾಜದ ಬದಲಾವಣೆಗೆ ಶ್ರಮಿಸು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಸರ್ವೋದಯ, ಸ್ವರಾಜ್ಯ ಮತ್ತು ಸ್ವದೇಶಿ ಸೇವಾ ಕಾರ್ಯದ ಮೇಲೆ ಸಾಮಾಜಿಕ ಬದಲಾವಣೆ ತರಬೇಕಿದೆ ಎಂಬ ಗಾಂಧೀಜಿಯವರ ಮಹತ್ವದ ಆಶಯಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯಕ್ರಮಾಧಿಕಾರಿ ಮಂಜುನಾಥ. ಎನ್, ಸ್ವಯಂ ಸೇವಕರಾದ ಪ್ರಜ್ವಲ್, ಸಿಂಚನ, ಪ್ರಿಯಾಂಕ, ಇಂದ್ರಸೇನಾ, ಹೇಮಂತ್, ರಶ್ಮಿತ, ಅದಿತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.